ಕೆ.ಆರ್.ಪೇಟೆ,ಜೂ.13: ಹಬ್ಬ ಹರಿದಿನಗಳು ಹಾಗೂ ಜಾತ್ರೆ ರಥೋತ್ಸವಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿವೆ. ಹಬ್ಬದ ಸಂಭ್ರಮದಲ್ಲಿ ಎಲ್ಲರೂ ಒಂದಾಗಿ ಭಾಗವಹಿಸಿದಾಗ ಸಿಗುವ ಸಂತೋಷಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ ಎಂದು ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಜಗದ್ಗುರುಗಳಾದ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಅವರು ಹೇಳಿದರು.
ಅವರು ಕೆ.ಆರ್.ಪೇಟೆ ತಾಲೂಕಿನ ಸಾಂಸ್ಕೃತಿಕ ಗ್ರಾಮವಾದ ಕೊರಟಿಕೆರೆಯ ಊರಹಬ್ಬದಲ್ಲಿ ಭಾಗವಹಿಸಿ ತಾಯಿ ಶ್ರೀ ರಾಮಲಿಂಗೇಶ್ವರ, ಚೌಡೇಶ್ವರಿ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.

ಭಾರತೀಯ ಸನಾತನ ಧರ್ಮಕ್ಕೆ ವಿಶ್ವದಲ್ಲಿಯೇ ಖ್ಯಾತಿ ಹಾಗೂ ಮನ್ನಣೆಯಿದೆ. ಕೊರಟಿಕೆರೆ ಗ್ರಾಮದಲ್ಲಿ ಗ್ರಾಮದ ಆರಾಧ್ಯ ದೇವತೆ ಶ್ರೀರಾಮಲಿಂಗ ಚೌಡೇಶ್ವರಿ ಅಮ್ಮನವರಿಗೆ 15 ವರ್ಷಗಳ ನಂತರ ಊರಹಬ್ಬ, ಬಲಿಪ್ರಧಾನ ಹಾಗೂ ಗ್ರಾಮದ ದೇವರುಗಳಾದ ಶ್ರೀ. ವೀರಭದ್ರೇಶ್ವರ, ಈಶ್ವರ, ಬಸವೇಶ್ವರ ಜಾತ್ರಾ ಮಹೋತ್ಸವವು ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ನಡೆಯುತ್ತಿದೆ. ನಮ್ಮ ಸಂಸ್ಕೃತಿ ಹಾಗೂ ಆಚಾರ ವಿಚಾರಗಳ ಮೇಲೆ ಬೆಳಕು ಚೆಲ್ಲುವ ಹಬ್ಬದಲ್ಲಿ ಭಾಗಿಯಾಗುವುದೇ ನಮ್ಮ ಸುಕೃತ ಪುಣ್ಯವಾಗಿದೆ ಎಂದು ತಿಳಿಸಿದ ಕೆಂಗೇರಿಶ್ರೀಗಳು ಕೊರಟಿಕೆರೆ ಗ್ರಾಮದ ಜನರ ಸಂಸ್ಕೃತಿಯ ಆರಾಧನೆ ಹಾಗೂ ಧಾರ್ಮಿಕ ನಂಬಿಕೆಯು ಎಲ್ಲರಿಗೂ ಮಾದರಿಯಾಗಿದೆ ಎಂದು ಹೇಳಿದರು.

ಬೆಳಿಗ್ಗೆ ನಡೆದ ಧಾರ್ಮಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ.ನಿರ್ಮಲಾನಂದನಾಥಸ್ವಾಮೀಜಿ ಮಾತನಾಡಿ ಪ್ರಪಂಚದಲ್ಲಿ ಎಲ್ಲಾ ವಸ್ತುಗಳನ್ನು ಮಾರುಕಟ್ಟೆ ಯಲ್ಲಿ ಕೊಂಡುಕೊಳ್ಳಬಹುದು. ಆದರೆ ಶಾಂತಿ ನೆಮ್ಮದಿಯನ್ನು ಯಾವುದೇ ಮಾರುಕಟ್ಟೆಯಲ್ಲಿ ಕೊಂಡುಕೊಳ್ಳಲು ಸಿಗುವುದಿಲ್ಲ. ಕೇವಲ ದೇವಾಲಯಕ್ಕೆ ಶ್ರದ್ದಾಭಕ್ತಿಯಿಂದ ಬೇಟಿ ನೀಡಿ ದೇವರನ್ನು ನಿಸ್ಕಲ್ಮಶ ಮನಸ್ಸಿನಿಂದ ಪ್ರಾರ್ಥಿಸಿ ಪೂಜಿಸಿದಾಗ ಮನಸ್ಸಿಗೆ ಶಾಂತಿ ನೆಮ್ಮದಿ ಸಿಗುತ್ತದೆ ಹಾಗೂ ಬಡವರಿಗೆ ದಾನ ಧರ್ಮ ಮಾಡಿದಾಗಲೂ ಶಾಂತಿ ನೆಮ್ಮದಿಯನ್ನು ದೇವರು ನೀಡುತ್ತಾನೆ ಹಾಗಾಗಿ ದೇವಾಲಯಗಳನ್ನು ಸಂರಕ್ಷಣೆ ಮಾಡಬೇಕು. ಹಬ್ಬ ಹರಿದಿನಗಳನ್ನು ಹಿರಿಯರ ಆಶಯದಂತೆ ಮುಂದುವರೆಸಿಕೊಂಡು ಹೋಗಬೇಕು. ಈ ಮೂಲಕ ನಮ್ಮ ಸಂಸ್ಕೃತಿ ಪರಂಪರೆಯನ್ನು ಉಳಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಚುಂಚಶ್ರೀಗಳು ಕರೆ ನೀಡಿದರು.

ದೇವಾಂಗ ಗುರುಪೀಠದ ಶ್ರೀಗಳಾದ ಶ್ರೀ ದಯಾನಂದಪುರಿ ಸ್ವಾಮೀಜಿ ಮಾತನಾಡಿ ಹುಟ್ಟು ನಮಗೆ ತಿಳಿಯುತ್ತದೆ ಆದರೆ ಸಾವು ಯಾವಾಗ ಬೇಕಾದರೂ ಬರಬಹುದು. ಹುಟ್ಟು ಸಾವಿನ ಮಧ್ಯೆ ಉತ್ತಮ ಸೇವಾ ಕಾರ್ಯಗಳನ್ನು ಮಾಡುವ ಮೂಲಕ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು. ಇಂತಹ ಪುಷ್ಯದ ಕಾರ್ಯ ಮಾಡುತ್ತಿರುವ ಕೊರಟೀಕೆರೆ ಗ್ರಾಮಸ್ಥರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಚೌಡೇಶ್ವರಿ ದೇವಿಯಲ್ಲಿ ಪ್ರಾರ್ಥಿಸಿದರು.
ಶಾಸಕ ಹೆಚ್.ಟಿ.ಮಂಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕೊರೋನಾ ಹಿನ್ನೆಲೆಯಲ್ಲಿ 12 ವರ್ಷಕ್ಕೆ ನಡೆಯಬೇಕಾಗಿದ್ದ ಊರ ಹಬ್ಬವು 3 ವರ್ಷ ತಡವಾಗಿ 15 ವರ್ಷಗಳ ನಂತರ ಸಾಧುಸಂತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯುತ್ತಿದೆ. ಗ್ರಾಮದ ಜನರು ಜಾತಿ, ಮತ ಹಾಗೂ ಪಂಥಗಳಿಂದ ಮುಕ್ತವಾಗಿ ಎಲ್ಲರೂ ಒಂದಾಗಿ ಸಂತೋಷದಿಂದ ಹಬ್ಬದಲ್ಲಿ ಭಾಗಿಯಾಗಿ ನಾಡಿಗೆ ಭಾವೈಕ್ಯತೆಯ ಸಂದೇಶ ನೀಡಿದ್ದಾರೆ ಎಂದು ಹೇಳಿದರು.

ಮಂಡ್ಯದ ವಿಶ್ವಮಾನವ ಕ್ಷೇತ್ರದ ಶ್ರೀ ಪುರುಷೋತ್ತಮಾನಂದ ನಾಥ ಸ್ವಾಮೀಜಿ, ಬೆಡದ ಹಳ್ಳಿಯ ಶ್ರೀ ಪಂಚಭೂತೇಶ್ವರ ಮಠದ ಶ್ರೀ.ರುದ್ರಮುನಿ ಸ್ವಾಮೀಜಿ, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ತುರುವೇಕೆರೆ ಮಾಜಿ ಶಾಸಕ ಎಂ.ಡಿ. ಲಕ್ಷ್ಮೀನಾರಾಯಣ್ , ಬಿ. ಪ್ರಕಾಶ್, ಆರ್.ಟಿ.ಓ.ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಆರ್.ಟಿ.ಓ.ಮಲ್ಲಿಕಾರ್ಜುನ್, ಟೆಎಪಿಸಿಎಂಎಸ್ ನಿರ್ದೇಶಕ ಕೆ.ಎಸ್.ದಿನೇಶ್, ಸಮಾಜ ಸೇವಕ ಮೊಟ್ಟೆ ಮಂಜು, ಎಳೆನೀರು ವ್ಯಾಪಾರಿ ಕುಮಾರ್, ಬೆಂಗಳೂರಿನ ಮಹಿಳಾ ಹೋರಾಟಗಾರ್ತಿ ಮಹಾಲಕ್ಷ್ಮಿ, ಉಧ್ಯಮಿ ಡಾ.ಬಿ.ರಾಜಶೇಖರ್, ತಾ. ಪಂ. ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ, ಶ್ರೀ ಚೌಡೇಶ್ವರಿ ದೇವಾಲಯ ಟ್ರಸ್ಟ್ ಅಧ್ಯಕ್ಷ ವಿಶ್ವನಾಥ್, ಕಾರ್ಯದರ್ಶಿ ಗೋವಿಂದರಾಜು, ಭಾರತೀಪುರ ಕ್ರಾಸ್ ಗ್ರಾಮ ಪಂಚಾಯತ್ ಅಧ್ಯಕ್ಷ ಬಿ.ಎನ್. ಕುಮಾರ್, ತಾಲೂಕು ಬಿಜೆಪಿ ಹಿರಿಯ ಉಪಾಧ್ಯಕ್ಷ ಭಾರತೀಪುರ. ಪುಟ್ಟಣ್ಣ, ತಾ.ಪಂ.ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್, ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕಿರಾಮ್, ತಾಲ್ಲೂಕು ಅರ್ಚಕರ ಸಂಘದ ಅಧ್ಯಕ್ಷ ಕೆ.ಎಸ್.ರವಿಚಂದ್ರ, ಪ್ರಥಮ ದರ್ಜೆ ಗುತ್ತಿಗೆದಾರರಾದ ಕೊರಟೀಕೆರೆ ರಾಜೇಶ್, ರವಿ, ಭಾರತೀಪುರ ಮಂಜುನಾಥ್ ಸೇರಿದಂತೆ ಸಾವಿರಾರು ಜನರು ಊರಹಬ್ಬದಲ್ಲಿ ಭಾಗವಹಿಸಿದ್ದರು.

ಜಾನಪದ ಕಲಾ ತಂಡಗಳ ವೈಭವದ ಮೆರವಣಿಗೆಯು ಎಲ್ಲರ ಗಮನ ಸೆಳೆಯಿತು. ಯತಿಶ್ರೀಗಳನ್ನು ಕನ್ನೇಶ್ವರ ದೇವಾಲಯದ ಆವರಣದಿಂದ ವೇದಿಕೆಯವರೆಗೆ ಕೆಂಗೇರಿಶ್ರೀ, ದೇವಾಂಗಶ್ರೀ, ಚುಂಚಶ್ರೀಗಳನ್ನು ಬೆಳ್ಳಿಯ ಸಾರೋಟಿನಲ್ಲಿ ವಿಜೃಂಭಣೆಯಿಂದ ಮೆರವಣಿಗೆ ಮಾಡಿ ಗ್ರಾಮಕ್ಕೆ ಪೂರ್ಣ ಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು.
ಮೈಸೂರಿನ ಡಾ.ಶ್ರೀಧರಶರ್ಮಾ, ರವಿಚಂದ್ರ ಪೂಜಾ ವಿಧಿ ವಿಧಾನಗಳ ನೇತೃತ್ವ ವಹಿಸಿದ್ದರು.
- ಶ್ರೀನಿವಾಸ್ ಆರ್.