ರಾಮನಾಥಪುರ-ಚಿನ್ನದ ಪದಕ ಪಡೆದ ಶರಣ ಹೇಮಂತ್ ಕುಮಾರ್ ಅವರಿಗೆ ಬಸವಪಟ್ಟಣದಲ್ಲಿ ಘನ ಗೌರವ

ರಾಮನಾಥಪುರ: ಅರಕಲಗೂಡು ತಾಲ್ಲೂಕಿನ ಬಸವಪಟ್ಟಣ ಗ್ರಾಮದ ಶರಣ ಹೇಮಂತ್ ಕುಮಾರ್ ಅವರಿಗೆ ಮುಖ್ಯಮಂತ್ರಿ ಚಿನ್ನದ ಪದಕ ದೊರೆತ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಗೌರವ ಸಮಾರಂಭವು ಗ್ರಾಮದಲ್ಲಿ ಭಾವಪೂರ್ಣವಾಗಿ ನೆರವೇರಿತು.

ಬಸವಪಟ್ಟಣದ ಶ್ರೀ ತೋಂಟದಾರ್ಯ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಹೇಮಂತ್ ಕುಮಾರ್ ರವರಿಗೆ ಗೌರವ ಸಮರ್ಪಿಸಲಾಯಿತು. ಈ ಸಮಾರಂಭವು ವಯೋವೃದ್ಧ ಶಿಕ್ಷಕರಿಗೆ ಸಲ್ಲಿಸಲಾದ ಗೌರವ ಕಾರ್ಯಕ್ರಮದ ಅಂಗವಾಗಿ ನಡೆಯಿತು.

ಶರಣ ಹೇಮಂತ್ ಕುಮಾರ್ ಅವರು ಪೊಲೀಸ್ ಇಲಾಖೆಯಲ್ಲಿ ಸೈಬರ್ ಪೊಲೀಸರಾಗಿ ಸೇವೆ ಸಲ್ಲಿಸುತ್ತಿದ್ದು, ತಮ್ಮ ಶ್ರೇಷ್ಠ ಸೇವೆಯನ್ನು ಗುರುತಿಸಿದ ಕರ್ನಾಟಕ ಸರ್ಕಾರ 2023ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕ ನೀಡಿ ಇವರನ್ನು ಗೌರವಿಸಿದೆ. ಈ ಪ್ರಶಸ್ತಿ ಇತ್ತೀಚೆಗೆ ಬೆಂಗಳೂರಿನ ಕೆ.ಎಸ್.ಆರ್.ಪಿ. ಪರೇಡ್ ಮೈದಾನದಲ್ಲಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರಿಂದ ಪ್ರಧಾನವಾಯಿತು.

ಹೆಮಂತ್ ಕುಮಾರ್ ಅವರ ಜೀವಿತ ಪಥ:

ಬಸವಪಟ್ಟಣದ ನಿವೃತ್ತ ಮುಖ್ಯಶಿಕ್ಷಕ ದಿವಂಗತ ಬಿ.ಎಸ್. ಶ್ರೀಕಂಠಪ್ಪ ಮತ್ತು ಶ್ರೀಮತಿ ಮಣಿ ಟಿ. ದಂಪತಿಯ ಪುತ್ರರಾಗಿರುವ ಹೇಮಂತ್ ಕುಮಾರ್ 1984ರ ಜುಲೈ 1ರಂದು ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬಸವಪಟ್ಟಣದಲ್ಲಿ ಪೂರ್ಣಗೊಳಿಸಿದ ಅವರು, ತುಮಕೂರಿನ ಸಿದ್ದಗಂಗಾ ಮಠದಲ್ಲಿ ಉನ್ನತ ಶಿಕ್ಷಣ ಪಡೆದು ನಂತರ ಬೆಂಗಳೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

2009ರ ಏಪ್ರಿಲ್ 1ರಂದು ಪೊಲೀಸ್ ಇಲಾಖೆಯಲ್ಲಿ ಸೇವೆ ಆರಂಭಿಸಿದ ಅವರು, ವಿಜಿಪುರಂ, ಹನುಮಂತನಗರ ಮತ್ತು ಸೈಬರ್ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು, ಪ್ರಸ್ತುತ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹಲವು ಪ್ರಮುಖ ಪ್ರಕರಣಗಳನ್ನು ಉತ್ತೇಖವಾಗಿ ಪತ್ತೆಹಚ್ಚಿದ ಈ ಅಧಿಕಾರಿ, ಹಿರಿಯ ಅಧಿಕಾರಿಗಳ ಪ್ರಶಂಸೆಗೂ ಪಾತ್ರರಾಗಿದ್ದಾರೆ.

ಶರಣ ಹೇಮಂತ್ ಕುಮಾರ್ ಅವರ ಈ ಸಾಧನೆಯು ಮಾತ್ರವಲ್ಲದೇ, ಅವರ ಗ್ರಾಮ ಹಾಗೂ ಜಿಲ್ಲೆಯ ಗೌರವವನ್ನು ಹೆಚ್ಚಿಸಿದ್ದು, ಮುಂದಿನ ದಿನಗಳಲ್ಲಿ ಅವರು ಮತ್ತಷ್ಟು ಯಶಸ್ಸು ಗಳಿಸಲಿ ಎಂಬ ಶುಭಾಶಯಗಳು ವ್ಯಾಪಕವಾಗಿ ವ್ಯಕ್ತವಾಗಿವೆ.

– ಶಿವಕುಮಾರ್‌ ಕೆಲ್ಲೂರು.

Leave a Reply

Your email address will not be published. Required fields are marked *