ಕೊರಟಗೆರೆ ;- ಹೇಮಾವತಿ ಲಿಂಕ್ ಕೆನಾಲ್ ವಿರುದ್ದದ ರೈತಪರ ಹೋರಾಟದಲ್ಲಿ ಜಿಲ್ಲೆಯ ೫ ಮಂದಿ ಮಠಾಧೀಶರು ಮತ್ತು ರೈತರ ಮೇಲೆ ಎಫ್.ಐ.ಆರ್. ದಾಖಲು ಮಾಡಿರುವುದು ಖಂಡನೀಯ ಈ ಪ್ರಕರಣವನ್ನು ಸರ್ಕಾರ ಹಿಂಪಡೆಯುವಂತೆ ಗೃಹ ಸಚಿವರ ಬಳಿ ತಿಳಿಸಲಾಗಿದೆ ಎಂದು ಬಾಳೇಹೊನ್ನೂ ರಂಭಾಪುರಿ ಮಠದ ಶ್ರೀ ಪ್ರಸನ್ನ ರೇಣುಕ ಡಾ,ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಅವರು ತಾಲೂಕಿನ ಸಿದ್ದರಬೆಟ್ಟದ ಬಾಳೇಹೊನ್ನೂರು ಖಾಸಾ ಶಾಖಾ ಮಠದ 19ನೇ ವರ್ಷದ ವಾರ್ಷಿಕೋತ್ಸವ, ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತೋತ್ಸವ ಹಾಗೂ ಸಾಮೂಹಿಕ ವಿವಾಹಗಳು, ಜನಜಾಗೃತಿ ಧರ್ಮ ಸಮಾರಂಭದಲ್ಲಿ ದಿವ್ಯ ಸಾನಿದ್ಯ ವಹಿಸಿ ಮಾತನಾಡಿ ಈ ನಾಡಿನಲ್ಲಿ ಹೋರಾಟಮಾಡುವ ಹಕ್ಕು ಪ್ರತಿಯೊಬ್ಬರಿಗೂ ಇದೆ, ಅದರಲ್ಲೂ ರೈತರ ಪರವಾಗಿ ಶ್ರೀಗಳು ಹೋರಾಟಮಾಡಿದರೆ ಅವರ ವಿರುದ್ದ ಪ್ರಕರಣ ದಾಖಲಿಸಿರುವುದು ಸಮಾಜದಲ್ಲಿ ಒಳ್ಳೆಯ ಬೆಳವಣಿಗೆಯಲ್ಲ ಇದು ಸರ್ಕಾರಕ್ಕೂ ಶ್ರೇಯಸ್ಸು ತರುವುದಿಲ್ಲ ಕೂಡಲೆ ಜಿಲ್ಲೆಯಲ್ಲಿ ಹೋರಾಟ ಮಾಡಿರುವ ಸ್ವಾಮೀಜಿ ಮತ್ತು ರೈತರ ಮೇಲಿನ ಪ್ರಕರಣಗಳನ್ನು ಸರ್ಕಾರ ಹಿಂಪಡಿಯುವಂತೆ ಸಮಾರಂಭಕ್ಕೆ ಆಗಮಿಸಿದ್ದ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ರವರ ಬಳಿ ಮಾತನಾಡಲಾಗಿದೆ ಅವರು ಸಹ ಸ್ಪಂದಿಸುವ ಭರವಸೆಯನ್ನು ನೀಡಿದ್ದಾರೆ ಹೋರಾಟಗಳನ್ನು ಶಾಂತಿಯಿಂದ ಬಗೆಹರಿಸಬೇಕೆ ಹೊರತು ಹತ್ತಿಕಬಾರದು ಎಂದರು.

ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ದಿ ಕುಂಠಿತವಾಗಲು ಕಾರಣವಾಗುತ್ತಿದೆ ಎಂದು ಆಡಳಿತ ಪಕ್ಷದ ಶಾಸಕರೇ ನನ್ನ ಬಳಿ ಹಲವರು ಹೇಳಿಕೊಂಡಿದ್ದಾರೆ, ಈಗಲಾದರು ಸರ್ಕಾರವು ಗ್ಯಾರಂಟಿಗಳಲ್ಲಿ ಅವಶ್ಯಕತೆ ಇಲ್ಲದ್ದನ್ನು ತೆಗೆದು ರಾಜ್ಯದ ಅಭಿವೃದ್ದಿಗೆ ಚೀಂತನೇ ನಡೆಸಬೇಕಿದೆ ರಾಜ್ಯದಲ್ಲಿ ಇತ್ತೀಚಿನ ಅನೇಕ ಪ್ರಕರಣಗಳು ಗೊಂದಲ ವಾತಾವರಣವನ್ನು ಮೂಡಿಸುತ್ತಿದ್ದು ಅದು ಆಗಬಾರದು ಎಂದರು,
ಶ್ರೀ ಕ್ಷೇತ್ರ ಸಿದ್ದರಬೆಟ್ಟದಲ್ಲಿ ನಡೆಯುತ್ತಿರುವ ಉಚಿತ ಸಮೂಹಿಕ ವಿವಾಹ, ಧರ್ಮಜಾಗೃತಿ ಶಿಬಿರವು ಸಾವಿರಾರು ಬಡ ಕುಟುಂಬಗಳ ಕಷ್ಟವನ್ನು ನಿವಾರಿಸಿದೆ, ಇತ್ತೀಚೆಗೆ ಜನರು ಆಡಂಬರ ಮದುವೆಗಳಿಗೆ ಒಲವು ತೋರಿಸುತ್ತಿದ್ದು ಇದರಿಂದ ಬಡ ಕುಟುಂಬಕ್ಕೆ ಕಷ್ಟ ವಾಗುತ್ತಿದೆ, ಸಾಮೂಹಿಕ ವಿವಾಹ ಎಲ್ಲಾ ಜಾತಿ ಧರ್ಮದವರು ಒಂದೆಡೆ ಸೇರಿ ನಡೆಸುವ ವಿವಾಹವಾಗಿದ್ದು ಇದು ಮುನ್ನಡೆಯಬೇಕು ಎಂದ ಅವರು ಶ್ರೀ ವೀರಭದ್ರಶಿವಾಚಾರ್ಯಸ್ವಾಮೀಜಿರವರು ೧೯ ವರ್ಷಗಳಲ್ಲಿ ೯೦ ವರ್ಷದ ಸಾಧನೆಯನ್ನು ಮಾಡಿದ್ದಾರೆ, ಶ್ರೀ ಮಠವು ಅತ್ಯಂತ ಎತ್ತರಕ್ಕೆ ಬೆಳೆದಿದ್ದು ಇಲ್ಲಿ ಜನರಿಗೆ ಧರ್ಮಬೋದನೆ ಸಮಾನ ಮನಸ್ಥಿತಿ ಜಾತ್ಯಾತೀತ ಭಾವನೆ ಬಿತ್ತುವಲ್ಲಿ ಶ್ರೀಗಳು ಸಾಧನೆ ಮಾಡಿದ್ದಾರೆ, ಮಠವು ಇನ್ನೂ ಉನ್ನತ ಸ್ಥಾಯಿಗೆ ಹೋಗಲಿದೆ ಎಂದರು.

ಶ್ರೀ ವೀರಭದ್ರಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಈ ಭಾಗದಲ್ಲಿ ಶ್ರೀ ಮಠದಿಂದ ಧರ್ಮವನ್ನು ಉಳಿಸುವ ಬೆಳೆಸುವ ಕೆಲಸವನ್ನು ಮಾಡಲಾಗುತ್ತಿದ್ದು 21 ನೇ ಶತಮಾನಕ್ಕೆ ಇದರ ಅಗತ್ಯತೆ ಹೆಚ್ಚಾಗಿದೆ, ಪ್ರಸ್ತುತ ಸಮಾಜದಲ್ಲಿ ಜನರು ಧರ್ಮಕ್ಕಿಂತ ಆಧರ್ಮದ ದಾರಿಯನ್ನೆ ಹೆಚ್ಚಾಗಿ ಪಾಲಿಸುತ್ತಿದ್ದಾರೆ, ಯುವ ಸಮಾಜ ಸಂಪೂರ್ಣ ದಾರಿತಪ್ಪುವತ್ತ ಸಾಗುತ್ತಿದ್ದು ಇದು ನೆಮ್ಮದಿ ಮತ್ತು ಶಾಂತಿಯುತ ಆರೋಗ್ಯ ಸಮಾಜಕ್ಕೆ ಮಾರಕವಾಗಿದೆ, ಇತ್ತಿಚೆಗೆ ಮಕ್ಕಳು ತಂದೆ-ತಾಯಿಗಳ ಬಗ್ಗೆ ತೆಗೆದುಕೊಳ್ಳುತ್ತಿರುವ ನಿಲುವುಗಳು ಆಂತಕ ಕಾರ್ಯವಾಗಿದೆ, ವಯಸ್ಸಾದ ಸಂದರ್ಭದಲ್ಲಿ ಅವರನ್ನು ಅತಿ ಭಾರ ವಸ್ಥುಗಳನ್ನಾಗಿ ನೋಡುವ ದೃಷ್ಠಿ ಬದಲಾಗದಿದ್ದರೆ ಸಮಾಜವು ಪೂರ್ಣ ಹಾಳಾದಂತೆ ಇದರ ಜಾಗೃತಿ ಮೂಡಿಸುವ ಕಾರ್ಯಗಳು ಆಗಬೇಕಿದೆ ಇದರಲ್ಲಿ ತಂದೆ ತಾಯಿಗಳ ತಪ್ಪು ಸಹ ಸಾಕಷ್ಟು ಇದ್ದು ಮಕ್ಕಳಿಗೆ ಬಾಲ್ಯದಲ್ಲೆ ಅಂಕಗಳಿಸುವ ಶಿಕ್ಷಣ ನೀಡುತ್ತಾರೆ ಹೊರತು ಗುಣಾತ್ಮಕ ಮತ್ತು ಸನ್ಮಾರ್ಗದ ಶಿಕ್ಷಣ ನೀಡುವ ಕೆಲಸ ಮಾಡದೇ ಇರುವುದಾಗಿದೆ ಎಂದ ಅವರು ಶ್ರೀ ಕ್ಷೇತ್ರದಲ್ಲಿ ಈಗಾಗಲೆ ಹಲವಾರು ಧರ್ಮಕಾರ್ಯಗಳು ನಡೆಯುತ್ತಿದ್ದು ಇಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಈ ಹಿಂದೆ ನೀಡಿದ್ದ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ 1.25 ಕೋಟಿ ರೂಗಳಲ್ಲಿ ದಾಸೋಹ ಕಟ್ಟಡ ಮತ್ತು ವಸತಿ ಗೃಹಗಳನ್ನು ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಉದ್ಘಾಟಿಸಿದ್ದಾರೆ, ಮುಂಬರುವ ದಿನಗಳಲ್ಲಿ ಕ್ಷೇತ್ರದಲ್ಲಿ ಉಚಿತ ವೃದ್ದಾಶ್ರಮ, ನೂರು ಅಡಿಗಳ ಶಿವ ಲಿಂಗಸ್ಥಾಪನೆ, ಸಸ್ಯ ಸಂಜೀವಿನಿ ಆಸ್ಪತ್ರೆ ಸೇರಿದಂತೆ ಹಲವು ದ್ಯೇಯಗಳನ್ನು ಇಟ್ಟುಕೊಳ್ಳಲಾಗಿದೆ ಎಂದರು.

ಈ ಸಮಾರಂಭದಲ್ಲಿ ಡಾ.ಶ್ರೀ ಹನುಮಂತನಾಥಸ್ವಾಮೀಜಿ, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಕೇಂದ್ರ ಸಚಿವ ವಿ.ಸೋಮಣ್ಣ, ಶಾಸಕ ಜ್ಯೋತಿ ಗಣೇಶ್, ಶ್ರೀ ರೇಣುಕಾ ಶಿವಾಚಾರ್ಯಸ್ವಾಮೀಜಿ, ಖಾರದ ಮಠದ ವೀರಬಸವಸ್ವಾಮೀಜಿ, ತಂಗನಹಳ್ಳಿ ಬಸವಲಿಂಗ ಸ್ವಾಮೀಜಿ, ಮಾಜಿ ವಿಧಾನ ಪತಿಷತ್ ಸದಸ್ಯ ಗುಂಡುಮಲೆ ತಿಪ್ಪೆಸ್ವಾಮಿ, ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿ.ಪಂ.ಸಿಇಓ ಪ್ರಭು, ಜಿಲ್ಲಾ ವರೀಷ್ಠಾಧಿಕಾರಿ ಕೆ.ವಿ.ಅಶೋಕ್, ಉಪವಿಭಾಗಾಧಿಕಾರಿ ಗೋಟೂರುಶಿವಪ್ಪ, ತಹಶೀಲ್ದಾರ್ ಮಂಜುನಾಥ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್, ಜೆಡಿಎಸ್ ತಾಲೂಕು ಅಧ್ಯಕ್ಷ ಕಾಮರಾಜು, ಬಿಜೆಪಿ ಮಂಡಲಾಧ್ಯಕ್ಷ ರುದ್ರೇಶ್, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ವೀರಭದ್ರಯ್ಯ, ಜಿಲ್ಲಾ ಯುವ ಅಧ್ಯಕ್ಷ ದರ್ಶನ್, ನಿದೇಶಕ ಜಿ.ಎಂ.ಶಿವಾನಂದ್, ತಾಲೂಕು ವೀರಶೈವ ಲಿಂಗಾಯಿತಿ ಸೇವಾ ಟ್ರಸ್ಟ್ ಅಧ್ಯಕ್ಷ ಸಿದ್ದಮಲ್ಲಯ್ಯ, ಪ.ಪಂ.ಸದಸ್ಯ ಎ.ಡಿ.ಬಲರಾಮಯ್ಯ, ತುಮುಲ್ ನಿರ್ದೇಶಕ ಸಿದ್ದಗಂಗಯ್ಯ, ಮುಖಂಡರುಗಳಾದ ಕೆ.ಬಿ.ಲೋಕೇಶ್, ಗೊಂದಿಹಳ್ಳಿ ರಂಗರಾಜು, ಸಿದ್ದರಬೆಟ್ಟ ರೋಟರಿ ಕಬ್ಲ್ ಕೆ.ಎನ್.ರಘು ಸೇರಿದಂತೆ ಇನ್ನಿತರರು ಹಾಜರಿದ್ದರು.
– ಶ್ರೀನಿವಾಸ್, ಕೊರಟಗೆರೆ.