ಸಕಲೇಶಪುರ, ಜೂನ್ 17: ತಾಲ್ಲೂಕಿನಲ್ಲಿ ಮುಂಗಾರು ಮಳೆ ಚುರುಕುಗೊಂಡಿರುವ ಹಿನ್ನೆಲೆಯಲ್ಲಿ ಶಿರಾಡಿ ಘಾಟ್ ನ ರಾಷ್ಟ್ರೀಯ ಹೆದ್ದಾರಿಯಲ್ಲಿ ದೊಡ್ಡ ತಪ್ಪಲು ಬಳಿ ಹಾಗೂ ಇತರ ಕಡೆ ಭೂಕುಸಿತಗಳು ಸಂಭವಿಸಿವೆ. ಮಳೆಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಸಂಚಾರದ ಮೇಲೆ ಪರಿಣಾಮ ಬೀರುತ್ತಿರುವಂತಾಗಿದೆ.
ಇಂದು ಉಪ ವಿಭಾಗಾಧಿಕಾರಿ (ಎಸ್ಡಿಎಂ) ಶೃತಿ ಭೂಕುಸಿತದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮಾತನಾಡಿದ ಅವರು, “ಮುಂದಿನ ದಿನಗಳಲ್ಲಿ ಮಳೆ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇರುವ ಕಾರಣ, ಮತ್ತಷ್ಟು ಭೂಕುಸಿತ ಸಂಭವಿಸಬಹುದು. ಸಾರ್ವಜನಿಕರು ಎಚ್ಚರಿಕೆಯಿಂದ ಪ್ರಯಾಣ ಮಾಡಬೇಕು ಮತ್ತು ಅಗತ್ಯವಿರುವ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು,” ಎಂದು ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ಗಳು ನಿತಿಲ್ ಹಾಗೂ ಪ್ರಸನ್ನ ಸ್ಥಳದಲ್ಲಿ ಹಾಜರಿದ್ದು, ಭೂಕುಸಿತದಿಂದಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ತಕ್ಷಣ ಕ್ರಮ ಕೈಗೊಳ್ಳುವಂತೆ ಉಪವಿಭಾಗಾಧಿಕಾರಿಗಳು ಸೂಚನೆ ನೀಡಿದರು. ಪ್ರಸ್ತುತ ಪ್ರದೇಶದಲ್ಲಿ ಹೆದ್ದಾರಿ ಅಧಿಕಾರಿಗಳ ತಂಡ ಹಾಗೂ ರಕ್ಷಣಾ ಸಿಬ್ಬಂದಿಗಳು ಕಾರ್ಯನಿರತವಾಗಿದ್ದಾರೆ.
ಪ್ರಮುಖ ಪ್ರವಾಸಾ ಮಾರ್ಗವಾಗಿರುವ ಶಿರಾಡಿ ಘಾಟ್ನಲ್ಲಿ ಈ ರೀತಿ ಭೂಕುಸಿತಗಳು ಸಂಭವಿಸುತ್ತಿರುವುದರಿಂದ ಸಾರ್ವಜನಿಕರು ಮತ್ತು ಪ್ರಯಾಣಿಕರು ಅಗತ್ಯ ಮುಂಜಾಗ್ರತೆಗಳನ್ನು ಪಾಲಿಸಬೇಕು ಎಂದು ಸ್ಥಳೀಯ ಆಡಳಿತದಿಂದ ಸೂಚಿಸಲಾಗಿದೆ.
- ರಕ್ಷಿತ್