ಅರಕಲಗೂಡು- ನೊಂದ ಬಡ ರೈತ ಕುಟುಂಬಕ್ಕೆ ನ್ಯಾಯ ನೀಡುವಂತೆ ಸುವರ್ಣ ಕರ್ನಾಟಕ ರಕ್ಷಣಾ ಸೇನೆಯ ಮನವಿ

ಅರಕಲಗೂಡು – ತಾಲ್ಲೂಕು ಸಿದ್ದಾಪುರ ಗ್ರಾಮದಲ್ಲಿ ನೊಂದ ಬಡ ರೈತ ಕುಟುಂಬದ ಜಮೀನು ವಿಚಾರದಲ್ಲಿ ಅನ್ಯಾಯವಾಗುತ್ತಿರುವ ಹಿನ್ನೆಲೆಯಲ್ಲಿ, ಸುವರ್ಣ ಕರ್ನಾಟಕ ರಕ್ಷಣಾ ಸೇನೆಯು ಸ್ಥಳೀಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ನ್ಯಾಯ ಒದಗಿಸುವಂತೆ ಆಗ್ರಹಿಸಿದೆ.

ಸುವರ್ಣ ಕರ್ನಾಟಕ ರಕ್ಷಣಾ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರು ಹಾಗೂ ಡಾ. ಸರೋಜಿನಿ ಮಹಿಷಿ ಚಳುವಳಿಯ ಹೋರಾಟಗಾರರಾದ ಡಾ. ಎಸ್. ರಾಘವೇಂದ್ರ ಗೌಡ ಮಾತನಾಡುತ್ತಾ, “ಸಿದ್ದಾಪುರ ಗ್ರಾಮದ ದಿವಂಗತ ತಮ್ಮೇಗೌಡರ ಪತ್ನಿ ಪುಟ್ಟಮ್ಮ ಅವರ ಕುಟುಂಬದ ಮಕ್ಕಳು ನಾಲ್ಕು ತಲೆಮಾರಿನಿಂದ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ ಇದೀಗ ಕೆಲ ಅಕ್ರಮ ಕದಡಿ ಈ ಜಮೀನನ್ನು ಬೇರೆ ವ್ಯಕ್ತಿಯ ಹೆಸರಿನಲ್ಲಿ ಪೌತಿ ಖಾತೆ ಮಾಡಿ, ನಿಜದ ಹಕ್ಕುದಾರರಿಗೆ ಅನ್ಯಾಯ ಮಾಡಲಾಗಿದೆ” ಎಂದು ವಿಷಾದ ವ್ಯಕ್ತಪಡಿಸಿದರು.

87 ವರ್ಷಗಳ ಹಿಂದೆ ಈ ಜಮೀನು ಬೋರೇಗೌಡರಿಂದ ರಾಮೇಗೌಡರಿಗೆ ಮಾರಾಟವಾಗಿದ್ದು, ತದನಂತರದ ಪರಂಪರೆಯವರು ಕೃಷಿ ಮಾಡಿಕೊಂಡು ಬಾಳುತ್ತಿದ್ದಾರೆ. ಆದರೆ ಈಗ ಗೌಪನಹಳ್ಳಿ ಗ್ರಾಮದ ವ್ಯಕ್ತಿಯೊಬ್ಬರು, ಸುಳ್ಳು ದಾಖಲೆಗಳ ಆಧಾರದಲ್ಲಿ ತಮ್ಮದೇ ಜಮೀನು ಎಂದು ದೂರು ನೀಡಿ, ಅಧಿಕಾರಿಗಳ ಮೌಲ್ಯಮಾಪನವಿಲ್ಲದೇ ಖಾತೆ ಬದಲಾವಣೆ ಮಾಡಿಸಿಕೊಂಡಿದ್ದಾರೆ ಎಂದು ಅವರು ಆರೋಪಿಸಿದರು.

ಈ ಘಟನೆಗೆ ಸಂಬಂಧಪಟ್ಟಂತೆ ಅರಕಲಗೂಡು ಹಾಗೂ ಕೊಣನೂರು ನಾಡಕಚೇರಿ ಅಧಿಕಾರಿಗಳು ಸರಿಯಾದ ಸ್ಥಳ ಪರಿಶೀಲನೆ ಮಾಡದೆ, ಪಂಚಾಯತಿ ಮಟ್ಟದ ವಿಚಾರಣೆಯಿಲ್ಲದೇ ಅಕ್ರಮವಾಗಿ ದಾಖಲೆ ಮಾಡಿರುವುದು ಖಂಡನಾರ್ಹವಾಗಿದೆ ಎಂದು ಡಾ. ರಾಘವೇಂದ್ರ ಗೌಡ ಹೇಳಿದರು.

ಈ ಕುರಿತು ತಕ್ಷಣ ಕ್ರಮ ಕೈಗೊಳ್ಳದೇ ಹೋದರೆ, ರೈತ ಕುಟುಂಬಗಳ ಪರವಾಗಿ ನಾಡಕಚೇರಿಗಳ ಮುಂದೆ ಉಗ್ರ ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದರು. ಜೊತೆಗೆ, ಅಕ್ರಮವಾಗಿ ದಾಖಲೆ ಮಾಡಿದವರಿಗೆ ಶಿಕ್ಷೆ ನೀಡಬೇಕು ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಜಿಲ್ಲಾಧಿಕಾರಿಗೆ ಆಗ್ರಹಿಸಿದರು.

ಈ ಸಂದರ್ಭ ಸೇನೆಯ ರಾಜ್ಯ ಮಹಿಳಾ ಅಧ್ಯಕ್ಷೆ ಮಧುಶ್ರೀ, ರಾಜೇಗೌಡ, ಸ್ವಾಮಿಗೌಡ, ಗೋವಿಂದೇಗೌಡ, ಯೋಗೇಶ್‌ಗೌಡ, ಜೈಲಕ್ಷ್ಮಿ, ಭಾಗ್ಯ, ಜಯಮ್ಮ, ಮಂಜುಳಾ, ಶಶಾಂಕ್, ದರ್ಶನ್, ರತ್ನಮ್ಮ, ಸುನಿಲ್, ಬಾಲು ಮಹೇಂದ್ರ ಹಾಗೂ ನೊಂದ ರೈತ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

-ಶಶಿಕುಮಾರ್

Leave a Reply

Your email address will not be published. Required fields are marked *