ಕೆ.ಆರ್.ಪೇಟೆ,ಜೂ.01: ತಾಲ್ಲೂಕಿನ ಬೂಕನಕೆರೆ ಹೋಬಳಿಯ ಅಟ್ಟುಪ್ಪೆ ಗ್ರಾಮದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಉಂಟಾಗಿದ್ದು, ಗ್ರಾಮದಲ್ಲಿರುವ ಎಲ್ಲಾ ಚರಂಡಿಗಳು ಸ್ವಚ್ಚತೆ ಕಾಣದೇ, ಗಬ್ಬೆದ್ದು ನಾರುತ್ತಿವೆ ಇದರಿಂದ ಗ್ರಾಮದಲ್ಲಿ ಸೊಳ್ಳೆಗಳ ಹಾವಳಿ ಕಾಟ ಜಾಸ್ತಿಯಾಗಿದೆ. ಗ್ರಾಮಸ್ಥರಿಗೆ ಸಾಂಕ್ರಾಮಿಕ ರೋಗಗಳು ಹರಡುವ ಬೀತಿ ಉಂಟಾಗಿದ್ದು ಕೂಡಲೇ ಗ್ರಾಮದ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಅಟ್ಟುಪ್ಪೆ ಗ್ರಾಮಸ್ಥರು ಗ್ರಾಮದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಗ್ರಾಮದಲ್ಲಿ ಲಕ್ಷಾಂತರ ರೂ ಖರ್ಚು ಮಾಡಿ ನಿರ್ಮಿಸಿರುವ ಶುದ್ದ ಕುಡಯುವ ನೀರಿನ ಘಟಕ ಕೆಟ್ಟುನಿಂತು ಸುಮಾರು ಎರಡು ವರ್ಷಗಳು ಕಳೆದಿದೆ ಇಲ್ಲಿಯವರೆವಿಗೂ ರಿಪೇರಿ ಮಾಡಿಲ್ಲ. ಗ್ರಾಮದ ಎಲ್ಲಾ ಚರಂಡಿಗಳು ಕೊಳಚೆ ನೀರು ಮತ್ತು ಹೂಳು ತುಂಬಿಕೊAಡು ಗಬ್ಬೆದ್ದು ನಾರುತ್ತಿವೆ. ಚರಂಡಿಗಳಲ್ಲಿ ಅನುಪಯುಕ್ತ ಗಿಡಗಂಟಿಗಳು ಆಳೆತ್ತರಕ್ಕೆ ಬೆಳೆದು ನಿಂತಿದ್ದು, ಚರಂಡಿಯಲ್ಲಿ ಹರಿಯಬೇಕಾದ ಗಿಡಗಂಟಿ ಮತ್ತು ಹೂಳು ತುಂಬಿರುವ ಕಾರಣ ನೀರು ಮುಂದೆ ಹೋಗದೇ ನಿಂತಲ್ಲೇ ನಿಂತಿರುತ್ತದೆ. ಇದರಿಂದಾಗಿ ಗ್ರಾಮದ ತುಂಬೆಲ್ಲ ದುರ್ನಾತ ಬೀರುತ್ತಿದ್ದು, ಗ್ರಾಮಸ್ಥರು ಮೂಗು ಮುಚ್ಚಿಕೊಂಡು ತಿರುಗಾಡಬೇಕಾದ ದುಸ್ಥಿತಿ ಗ್ರಾಮದಲ್ಲಿ ಕಂಡು ಬರುತ್ತಿದೆ. ಇನ್ನು ಕೆಲವು ಕಡೆ ಚರಂಡಿಯೇ ಇಲ್ಲದೇ ಕೊಳಚೆ ನೀರು ರಸ್ತೆಯಲ್ಲಿ ಹಾಗೂ ಮನೆಗಳ ಮುಂದೆ ಹರಿಯುತ್ತಿದೆ. ಈ ಸಂಬಂಧ ಗ್ರಾಮದ ಗ್ರಾಮ ಪಂಚಾಯಿತಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥರು ಇದು ಮಳೆಗಾಲ ಆಗಿರುವುದರಿಂದ ಮಳೆ ಬಿದ್ದಾಗ ಚರಂಡಿಗಳು ತುಂಬಿ ನೀರು ಮುಂದೆ ಹೋಗಲು ಸಾಧ್ಯವಾಗದೆ. ಅಕ್ಕ ಪಕ್ಕದ ಮನೆಗೆ ನೀರು ನುಗ್ಗಿ ಸಮಸ್ಯೆ ಉಂಟು ಮಾಡುತ್ತದೆ. ಹಾಗೂ ಕೊಳಚೆ ನೀರು ಚರಂಡಿಯಲ್ಲೇ ನಿಂತು ಕೊಳೆತು ನಾರುವುದರಿಂದ ಕೆಟ್ಟ ವಾಸನೆ ಬರುತ್ತಿದೆ. ಸೊಳ್ಳೆಗಳು ಹೆಚ್ಚಾಗಿದ್ದು ಮಲೇರಿಯಾ, ಡೆಂಗ್ಯೂ ದಂತಹ ಮಾರಕ ಕಾಯಿಲೆಗಳು ಹರಡಲು ಕಾರಣವಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಅಟ್ಟುಪ್ಪೆ ಗ್ರಾಮದ ಸಮಸ್ಯೆಗಳನ್ನು ಬಗೆಹರಿಸಬೇಕು. ಕೂಡಲೇ ಗ್ರಾಮವನ್ನು ಸ್ವಚ್ಚಗೊಳಿಸಬೇಕು. ಸುಸಜ್ಜಿತ ಚರಂಟಿ ನಿರ್ಮಿಸಿಕೊಡಬೇಕು. ಕೆಟ್ಟು ನಿಂತಿರುವ ಶುದ್ದ ಕುಡಿಯುವ ನೀರಿನ ಘಟಕ ದುರಸ್ತಿ ಮಾಡಿಸಿಕೊಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಗ್ರಾಮದ ಮುಖಂಡರಾದ ಕುಮಾರ್, ರಂಗಬೋಳೆಗೌಡ, ಜಯಲಕ್ಷ್ಮಿ ಕೃಷ್ಣೇಗೌಡ, ಶಿವೇಗೌಡ, ರೇವನಾಯಕ್, ಕೃಷ್ಣೇಗೌಡ, ನಾಗೇಶ್, ಗೋವಿಂದೇಗೌಡ, ಸುಂದರಮ್ಮ, ಪುಟ್ಟೇಗೌಡ, ಅನು ನಾಗೇಶ್, ಸೇರಿದಂತೆ ಹಲವು ಗ್ರಾಮಸ್ಥರು ಭಾಗವಹಿಸಿದ್ದರು.
– ಶ್ರೀನಿವಾಸ್ ಆರ್.