ತುಮಕೂರು- ಕ್ರೈಸ್ ವಸತಿ ಶಾಲಾ ಶಿಕ್ಷಕರ ಬೃಹತ್ ಜಾಥಾ – ಬೇಡಿಕೆಗಳ ಈಡೇರಿಕೆಗೆ ಜಿಲ್ಲಾಧಿಕಾರಿಗೆ ಮನವಿ

ತುಮಕೂರು : ಸಮಾಜ ಕಲ್ಯಾಣ ಇಲಾಖೆಯ ಅಧೀನದ ಕ್ರೈಸ್ ವಸತಿ ಶಾಲೆಗಳ ಖಾಯಂ ಶಿಕ್ಷಕರು/ನೌಕರರು ಹಲವು ಸೌಲಭ್ಯಗಳಿಂದ ವಂಚಿತರಾಗಿದ್ದು, ಅವರ ವಿವಿಧ ಬೇಡಿಕೆಗಳನ್ನು ಈಡೇರಿಸುವುದರ ಸಲುವಾಗಿ ಇಂದು ನಗರದ ಮಹಾನಗರ ಪಾಲಿಕೆಯ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಯ (ಬಿ.ಜಿ.ಎಸ್. ವೃತ್ತ) ಮುಂಭಾಗದಿಂದ ಜಿಲ್ಲಾಧಿಕಾರಿಗಳ ಕಛೇರಿಯವರಿಗೆ ಬೃಹತ್ ಜಾಥಾ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿರುತ್ತಾರೆ.

ಪ್ರತಿಭಟನೆಯನ್ನುದ್ದೇಶಿಸಿ ವಸತಿ ಶಾಲೆಗಳ ಸಂಘದ ತುಮಕೂರು ಜಿಲ್ಲಾಧ್ಯಕ್ಷರಾದ ಜನಾರ್ಧನ್‌ರವರು ಮಾತನಾಡಿ ಸರ್ಕಾರಕ್ಕೆ ವಸತಿ ಶಿಕ್ಷಣ ನಿರ್ದೇಶನಾಲಯ ರಚನೆ ಮಾಡುವುದು, ಜ್ಯೋತಿ ಸಂಜೀವಿನಿ ಅನುಷ್ಠಾನ ಮಾಡುವುದು, ಮರಣ ಮತ್ತು ನಿವೃತ್ತಿ ಉಪದಾನ ಸೌಲಭ್ಯ ಒದಗಿಸುವುದು, ಮನೆ ಬಾಡಿಗೆ ಕಡಿತದಿಂದ ವಿನಾಯಿತಿ ನೀಡುವುದು, 10% ವಿಶೇಷ ಭತ್ಯೆ ಮಂಜೂರಾತಿ ಸೇರಿ ಒಟ್ಟು ಐದು ಪ್ರಮುಖ ಬೇಡಿಕೆಗಳು ನಮ್ಮದಾಗಿದ್ದು, ಇವುಗಳನ್ನು ಆದಷ್ಟು ಬೇಗ ಸರ್ಕಾರ ಈಡೇರಿಸಬೇಕೆಂದು ಈ ಮೂಲಕ ಆಗ್ರಹಿಸುತ್ತಿದ್ದೇವೆಂದು ತಿಳಿಸಿದರು.

ಮುಂದುವರೆದು ಮಾತನಾಡುತ್ತಾ ನಾವು ಈಗಾಗಲೇ ರಾಜ್ಯ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಇದುವರೆವಿಗೂ ಪರಿಹಾರ ಸಿಕ್ಕಿರುವುದಿಲ್ಲ. ಆದ್ದರಿಂದ ನಮ್ಮ ಸಂಘದ ವತಿಯಿಂದ ಕಳೆದ ವಾರ ಅಂದರೆ ಮೇ 26 ರಿಂದ 28 ರವರೆಗೆ 3ದಿನಗಳ ಕಾಲ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಂವಿಧಾನಾತ್ಮಕ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿತ್ತು ಆದರೂ ರಾಜ್ಯ ಸರ್ಕಾರವು ಯಾವುದೇ ಸ್ಪಂದನೆಯನ್ನು ನೀಡದ ಕಾರಣ ಆರ್.ಎಸ್.ಇ.ಎ. ಹಾಗೂ ಕ್ರೈಸ್ ನೌಕರರ ಒಕ್ಕೂಟವು ಜಿಲ್ಲಾ ಮಟ್ಟದ ಹೋರಾಟಕ್ಕೆ ಕರೆ ನೀಡಿರುವ ಹಿನ್ನಲೆಯಲ್ಲಿ ನಾವು ಮೇ 29 ರಂದು ತುಮಕೂರು ಜಿಲ್ಲೆಯ ಎಲ್ಲಾ ವಸತಿ ಶಾಲೆಯಲ್ಲಿನ ಖಾಯಂ ಶಿಕ್ಷಕರು ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುವ ಮೂಲಕ ತಮ್ಮ ವೃತ್ತಿಪರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಯಿತು, ಅದರ ಭಾಗವಾಗಿ ಶುಕ್ರವಾರ ತರಗತಿಗಳನ್ನು ಬಹಿಷ್ಕಾರ ಮಾಡಿ ಅಸಹಕಾರ ವ್ಯಕ್ತಪಡಿಸಲಾಯಿತು. ನಂತರ ಇಂದು ಪಾದಯಾತ್ರೆ ಮೂಲಕ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತಿದ್ದೇವೆ, ಜೂನ್ 2ರ ಸೋಮವಾರ ತುಮಕೂರು ಮಾನ್ಯ ಜಿಲ್ಲಾಧಿಕಾರಿಗಳ ಕಛೇರಿಯ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತೇವೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಜಿ.ಎನ್.ಜನಾರ್ಧನ್, ಗೌರವಾಧ್ಯಕ್ಷರಾದ ಜಿತೇಂದ್ರ, ಕಾರ್ಯದರ್ಶಿಗಳಾದ ಸೋಮಶೇಖರ್, ಉಪಾಧ್ಯಕ್ಷರಾದ ರಮೇಶ್ ಸೇರಿದಂತೆ ನೂರಾರು ಸಂಖ್ಯೆಯ ಶಿಕ್ಷಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *