ತುಮಕೂರು: ಶಿಕ್ಷಣ ಕ್ಷೇತ್ರದಲ್ಲಿ ಪ್ರೊ.ಸಿ.ಎಸ್.ಸೋಮಶೇಖರ್ ರವರು ಭೌತಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕರಾಗಿ,ಪ್ರೊಫೆಸರ್ ಆಗಿ 35 ವರ್ಷ 5 ತಿಂಗಳುಗಳ ಕಾಲ ಸುದೀರ್ಘ ಸೇವೆ ಸಲ್ಲಿಸುವುದು ಎಂದರೆ ಸುಲಭವಾದ ಮಾತಲ್ಲ,ಅವರು ವಿದ್ಯಾರ್ಥಿಗಳೊಂದಿನ ಉತ್ತಮ ಸಂಬಂಧ,ವೃತ್ತಿಯಲ್ಲಿ ಬದ್ಧತೆ,ಶಿಸ್ತುಬದ್ಧ ಜೀವನ,ಹಿರಿಯರಿಗೆ ನೀಡುತ್ತಿದ್ದ ಗೌರವ,ಸಂಸ್ಕಾರ ಬಹಳ ದೊಡ್ಡದು,ಎನ್.ಸಿ.ಸಿ.ಅಧಿಕಾರಿಯಾಗಿ, 2004 ರಿಂದ 2021ರವರೆಗೆ ಹಿರಿಯ ವಿದ್ಯಾರ್ಥಿಗಳ ಸಂಘ(ರಿ)ದ ಕಾರ್ಯದರ್ಶಿಯಾಗಿ,ಐ.ಕ್ಯೂ.ಎ.ಸಿ.ಸಂಚಾಲಕರಾಗಿ,ನ್ಯಾಕ್ ನಲ್ಲಿ ಕಾಲೇಜಿಗೆ ಬಿ.ಡಬ್ಬಲ್ ಪ್ಲಸ್ ನಿಂದ ಎ ಗ್ರೇಡ್ ಬರಲು ಇವರು ಕಾರಣ,ಅಷ್ಟೇ ಅಲ್ಲದೆ ಕಾಲೇಜಿನ ಎಲ್ಲಾ ವಿಭಾಗಗಳಲ್ಲೂ ಕೆಲಸ ಮಾಡಿ ಸೈ ಎನಿಸಿಕೊಂಡವರು,ಅವರ ಶಿಸ್ತುಬದ್ಧ ಜೀವನ ನಮಗೆಲ್ಲರಿಗೂ ಮಾದರಿ,ಹಿರಿಯ ಪ್ರೊಫೆಸರ್ ವೃತ್ತಿಯಿಂದ ನಿವೃತ್ತಿಯಾಗುತ್ತಿರುವುದು ನಮಗೆಲ್ಲರಿಗೂ ಬೇಸರವಾಗಿದೆ,ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸುತ್ತೇನೆ ಎಂದು ಶ್ರೀ ಸಿದ್ಧಗಂಗಾ ಕಲಾ ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ||ಟಿ.ಬಿ.ನಿಜಲಿಂಗಪ್ಪನವರು ತಿಳಿಸಿದರು.

ಅವರು ಇಂದು ಶ್ರೀ ಸಿದ್ಧಗಂಗಾ ಕಲಾ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಭೌತಶಾಸ್ತ್ರ ವಿಭಾಗದಲ್ಲಿ ಪ್ರೊಫೆಸರ್ ಆಗಿ ಕೆಲಸ ನಿರ್ವಹಿಸಿ ನಿವೃತ್ತರಾದ ಪ್ರೊ.ಸಿ.ಎಸ್.ಸೋಮಶೇಖರಯ್ಯನವರನ್ನು ಸನ್ಮಾನಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗ ಆಗಮಿಸಿ ಮಾತನಾಡಿದ ಶ್ರೀ ಸಿದ್ಧಗಂಗಾ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ನಳಿನಾಕ್ಷಿರವರು ಮಾತನಾಡುತ್ತಾ ಪ್ರೊ.ಸಿ.ಎಸ್.ಸೋಮಶೇಖರ್ ರವರು ಈ ಕಾಲೇಜಿನ ವಿದ್ಯಾರ್ಥಿಯಾಗಿ ಇದೇ ಕಾಲೇಜಿನಲ್ಲಿ ಉಪನ್ಯಾಸಕರಾಗಿ,ಪ್ರೊಫೆಸರ್ ಆಗಿ ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಮಾರ್ಗದರ್ಶಕರಾಗಿ ಸಹಾಯ ಮಾಡಿದ್ದಾರೆ ಅವರ ಸೇವೆ ಶ್ಲಾಘನೀಯ ಎಂದು ಹೇಳಿದರು.

ನಿವೃತ್ತ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ಮತ್ತು ಹಿರಿಯ ವಿದ್ಯಾರ್ಥಿಗಳ ಸಂಘದ ಗೌರವ ಅಧ್ಯಕ್ಷರಾದ ಪ್ರೊ.ಟಿ.ಗಂಗಾಧರಯ್ಯನವರು ಮಾತನಾಡುತ್ತಾ ಪ್ರೊ.ಸಿ.ಎಸ್.ಸೋಮಶೇಖರ್ ರವರು ಹಿರಿಯ ವಿದ್ಯಾರ್ಥಿಗಳ ಸಂಘದ ಯಶಸ್ವಿ ಕಾರ್ಯದರ್ಶಿಯಾಗಿ 17 ವರ್ಷಗಳ ಕಾಲ ಕೆಲಸ ನಿರ್ವಹಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಸಂಘದ ಮೂಲಕ ಸಹಾಯ ಮಾಡಿದ್ದಾರೆ ಇವರಿಂದ ಸಿದ್ಧಗಂಗಾ ಶಿಕ್ಷಣ ಸಂಸ್ಥೆಗೆ,ಕಾಲೇಜಿಗೆ, ಹಿರಿಯ ವಿದ್ಯಾರ್ಥಿಗಳ ಸಂಘಕ್ಕೆ ಹೆಸರು ಬರಲು ಇವರು ಮಾಡಿರುವ ಕೆಲಸ ಕಾರ್ಯಗಳು ಸ್ಮರಣೀಯವಾದುದು ಎಂದು ತಿಳಿಸಿದರು.

ಗೌರವ ಸ್ವೀಕರಿಸಿ ಮಾತನಾಡಿದ ಪ್ರೊ.ಸಿ.ಎಸ್.ಸೋಮಶೇಖರಯ್ಯನವರು ಮಾತನಾಡುತ್ತಾ ನಾನು ಈ ಎತ್ತರಕ್ಕೆ ಏರಲು ಪೂಜ್ಯ ಡಾ||ಶ್ರೀ.ಶಿವಕುಮಾರಸ್ವಾಮೀಜಿಗಳ ಆಶೀರ್ವಾದ ಮತ್ತು ಮಾಗದರ್ಶನ ಕಾರಣ,ಇಂದು ಸಹ ಶ್ರೀ ಸಿದ್ಧಲಿಂಗಸ್ವಾಮೀಜಿ,ಕಿರಿಯ ಶ್ರೀಗಳಾದ ಶ್ರೀಶಿವಸಿದ್ದೇಶ್ವರ ಸ್ವಾಮೀಜಿಗಳ ಆಶೀರ್ವಾದ,ತಂದೆ-ತಾಯಿ,ನನ್ನ ಪತ್ನಿ ಶ್ರೀಮತಿ ಸುಮಿತ್ರಾ,ಮನೆಯ ಹಿರಿಯರು,ಕುಟುಂಬವರ್ಗದವರು ತೋರಿಸುವ ಪ್ರೀತಿ ವಿಶ್ವಾಸ,ಸಹಕಾರದಿಂದ ನಾನು 35 ವರ್ಷ 5 ತಿಂಗಳು ಪ್ರೊಫೆಸರ್ ಆಗಿ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಲು ಸಾಧ್ಯವಾಯಿತು,ಈವರೆವಿಗೂ ನಾನು ಕಾಯ,ವಾಚಾ,ಮನಸಾ ಸಂಸ್ಥೆಗಾಗಿ,ಕಾಲೇಜಿಗಾಗಿ,ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ದುಡಿದ ತೃಪ್ತಿ ನನಗೆ ಇದೆ,ಕಾಲೇಜು,ವಿದ್ಯಾರ್ಥಿಗಳಿಂದ ನನಗೆ ಉತ್ತಮ ಹೆಸರು ಬಂದಿದೆ ಎಂಬ ಸಂತೋಷ ಒಂದೆಡೆಯಾದರೆ ಈವರೆವಿಗೂ ಕೆಲಸದಲ್ಲಿ ನನಗೆ ಒಂದು ಕಪ್ಪುಚುಕ್ಕೆ ಬರದಂತೆ ನಡೆದುಕೊಂಡಿದ್ದೇನೆ ಎಂಬ ಆತ್ಮಸಂತೋಷ ಮತ್ತೊಂದೆಡೆ ಇದೆ ಎಂದು ಹೇಳಿದರು.

ಪ್ರೊ.ಸಿ.ಎಸ್.ಸೋಮಶೇಖರಯ್ಯ ದಂಪತಿಗಳನ್ನು ಹಿರಿಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳಾದ ಪ್ರೊ.ಟಿ.ಗಂಗಾಧರಯ್ಯ, ಸೂರ್ಯನಾರಾಯಣ ಗುಪ್ತ, ಪ್ರಸನ್ನಕುಮಾರ್,ನಾಗೇಶ್,ಬಸವರಾಜಪ್ಪ,ಡಾ||ಕಿಶೋರ್,ಪ್ರೊ.ಮೋಹನ್ ಕುಮಾರ್,ಪ್ರೊ.ಲಿಂಗದೇವರಪ್ಪ ಮುಂತಾದವರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಸುಮಿತ್ರಾ,ಬೋಧಕರು,ಬೋಧಕೇತರ ಸಿಬ್ಬಂದಿಗಳು,ಹಳೆಯ ವಿದ್ಯಾರ್ಥಿಗಳು,ಎನ್.ಸಿ.ಸಿ.ವಿದ್ಯಾರ್ಥಿಗಳು,ನಿವೃತ್ತ ಪ್ರೊಫೆಸರ್,ಉಪನ್ಯಾಸಕರು ಎಲ್ಲರೂ ಉಪಸ್ಥಿತರಿದ್ದು, ನಿವೃತ್ತರ ಬಗ್ಗೆ ಉತ್ತಮ ಅನಿಸಿಕೆಗಳನ್ನು ವ್ಯಕ್ತಪಡಿಸಿ,ಸನ್ಮಾನಿಸಿ ಗೌರವಿಸಿದರು.
– ಕೆ.ಬಿ.ಚಂದ್ರಚೂಡ