ತುಮಕೂರು: ಬಹುಜನ ಸಮಾಜ ಪಕ್ಷದ ಪ್ರಗತಿ ಪರಿಶೀಲನಾ ಸಭೆ – ಸಂಘಟನೆಯ ಬಲವರ್ಧನೆಗೆ ಚಿಂತನೆ

ತುಮಕೂರು, ಜೂನ್ 17: ಜಿಲ್ಲೆಯಲ್ಲಿ ಬಹುಜನ ಸಮಾಜ ಪಕ್ಷದ ಸಂಘಟನಾತ್ಮಕ ಬಲವನ್ನು ಹೆಚ್ಚಿಸಲು ಮತ್ತು ಮುಂದಿನ ರಾಜಕೀಯ ಚಟುವಟಿಕೆಗಳ ಬಗ್ಗೆ ಚಿಂತನೆ ನಡೆಸಲು ಭಾನುವಾರ ಪ್ರಗತಿ ಪರಿಶೀಲನಾ ಸಾಮಾನ್ಯ ಸಭೆಯನ್ನು ತುಮಕೂರು ಜಿಲ್ಲೆಯ ವಿಭಾಗೀಯ ನಾಯಕರ ನೇತೃತ್ವದಲ್ಲಿ ಆಯೋಜಿಸಲಾಯಿತು.

ಸಭೆಯಲ್ಲಿ ಸೆಂಟ್ರಲ್ ಸ್ಟೇಟ್ ಕೋ-ಆರ್ಡಿನೇಟರ್ ಅಶೋಕ್ ಚಕ್ರವರ್ತಿ, ರಾಜ್ಯ ಕಾರ್ಯದರ್ಶಿ ಶೂಲಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿ ಹನುಮಂತರಾಯ, ಜಿಲ್ಲಾಧ್ಯಕ್ಷ ಅಂಜನಮೂರ್ತಿ, ಮತ್ತು ಅನೇಕ ತಾಲ್ಲೂಕು ಪದಾಧಿಕಾರಿಗಳು ಭಾಗವಹಿಸಿದ್ದರು. ಸಭೆಯ ಮುಖ್ಯ ಉದ್ದೇಶಗಳು – ಗ್ರಾಮೀಣ ಪ್ರದೇಶಗಳಲ್ಲಿ ಸದಸ್ಯತ್ವ ಹೆಚ್ಚಿಸುವುದು, ಪಕ್ಷದ ತತ್ವಗಳನ್ನು ಜನರಿಗೆ ತಿಳಿಸುವುದು ಹಾಗೂ ದಲಿತರ ಮತ್ತು ಹಿಂದುಳಿದ ವರ್ಗಗಳ ಸಮಸ್ಯೆಗಳ ಪರಿಹಾರಕ್ಕೆ ಕಾರ್ಯತತ್ಪರಾಗಿರುವುದು.

ಜಿಲ್ಲಾ ಅಧ್ಯಕ್ಷ ಆಂಜನಪ್ಪ ಅವರು, “ಪಕ್ಷದ ಸಾಮಾಜಿಕ ತತ್ವಗಳನ್ನು ಹಳ್ಳಿ ಹಳ್ಳಿಗಳವರೆಗೆ ಹರಡಬೇಕು. ಬಿಎಸ್‌ಪಿ ಯಾವ ಜಾತಿ ಅಥವಾ ಸಮುದಾಯಕ್ಕೆ ಸೀಮಿತವಲ್ಲ. ಎಲ್ಲ ವರ್ಗದ ಜನರು ಈ ಪಕ್ಷದಲ್ಲಿ ಸೇರ್ಪಡೆಯಾಗಿ ತಮ್ಮ ಪಾತ್ರವನ್ನು ವಹಿಸಬಹುದು,” ಎಂದು ಹೇಳಿದರು.

ಅಶೋಕ್ ಚಕ್ರವರ್ತಿ ಅವರು ಮಾತನಾಡುತ್ತಾ, “ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಕಾನ್ಷಿರಾಮ್ ಅವರ ತತ್ವಗಳು ನಮ್ಮ ಮಾರ್ಗದರ್ಶಕ. ಸರ್ಕಾರದ ಬಳಿ ಬೇಡಿಕೆಗಳನ್ನು ಇಡುವ ಬದಲು, ಸ್ವಾಭಿಮಾನದ ಚಳವಳಿಯಿಂದ ಸತ್ಯಸಾಧನೆ ಮಾಡಬೇಕು. ನಮ್ಮ ಹಕ್ಕುಗಳನ್ನು ನಾವು ಪಡೆಯಬೇಕಿದೆ. ಅದಕ್ಕಾಗಿ ಸಂಘಟನೆಯ ಬಲ ಅಗತ್ಯ,” ಎಂದರು.

ಈ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಎಸ್.ಎನ್. ರವಿಕುಮಾರ್, ಕೊರಟಗೆರೆ ತಾಲ್ಲೂಕು ಅಧ್ಯಕ್ಷ ಎಸ್.ಜಿ. ಮಂಜುನಾಥ್, ಬಡಕನಹಳ್ಳಿ ರಾಜಣ್ಣ, ಶಿವದರ್ಶನ, ದೇವರಾಜು, ಕುಮಾರರಾಮ, ರಂಗರಾಜು ಸೇರಿದಂತೆ ಅನೇಕ ಪದಾಧಿಕಾರಿಗಳು ಭಾಗವಹಿಸಿದ್ದರು.

ವರದಿ: ನರಸಿಂಹಯ್ಯ, ಹೊಸಕೋಟೆ

Leave a Reply

Your email address will not be published. Required fields are marked *