ತುಮಕೂರು- ಭರತ ನಾಟ್ಯವು ಒಂದು ಸುಂದರ ಪ್ರಾಚೀನ ನೃತ್ಯ ಕಲೆಯಾಗಿದೆ. ಈ ಕಲೆಯನ್ನು ಉಳಿಸಿ ಬೆಳೆಸುವ ಕರ್ತವ್ಯ ನಮ್ಮೆಲ್ಲರ ಮೇಲಿದೆ ಎಂದು ತುಮಕೂರು ವಿವಿ ಕುಲಪತಿ ಪ್ರೊ. ವೆಂಕಟೇಶ್ವರಲು ಹೇಳಿದರು.
ನಗರದ ಡಾ. ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ನೀಲಾಲಯ ನೃತ್ಯ ಕೇಂದ್ರದ ಬಾಲ ವಿಶ್ವನಾಥ್ ಅವರ ಶಿಷ್ಯರಾದ ಕು. ಅನ್ವಿತಾ ಮಂಜುನಾಥ್ ಹಾಗೂ ನಂದಿನಿ ಮಂಜುನಾಥ್ ರವರ ಭರತನಾಟ್ಯ ರಂಗ ಪ್ರವೇಶ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭರತನಾಟ್ಯ ಕಲೆಯನ್ನು ನೀಲಾಲಯ ನೃತ್ಯ ಕೇಂದ್ರವು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿರುವುದು ನಿಜಕ್ಕೂ ಮೆಚ್ಚುವಂತಹ ಸಂಗತಿ. ಈ ನೃತ್ಯ ಕೇಂದ್ರವು ಸತತವಾಗಿ ಭರತನಾಟ್ಯ ಕಲೆಯನ್ನು ವಿದ್ಯಾರ್ಥಿಗಳಿಗೆ ಕಲಿಸುತ್ತಾ ರಂಗ ಪ್ರವೇಶ ಮಾಡಿಸುತ್ತಿರುವುದು ಸುಲಭದ ಮಾತಲ್ಲ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಎಸ್. ನಾಗಣ್ಣ, ಟಿವಿಎಸ್ ಅಕಾಡೆಮಿ ಪ್ರಿನ್ಸಿಪಾಲರಾದ ಸುಮನ ಎಂ.ಬಿ., ಹಿಂದುಸ್ತಾನಿ ಕ್ಲಾಸಿಕಲ್ ಮ್ಯೂಸಿಕ್ನ ವಿದ್ವಾನ್ ಶ್ರೀ ಸಿದ್ದೇಂದ್ರ ಕುಮಾರ್ ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು.
ಪುಷ್ಪಾಂಜಲಿಯ ಮುಖಾಂತರ ಪ್ರಾರಂಭವಾದ ಕಾರ್ಯಕ್ರಮವು ನಂತರ ಶ್ರೀ ಗಣೇಶ ಚರಣಂ ಎಂಬ ಗಣೇಶ ಸ್ತುತಿಯಿಂದ ಮುಂದುವರೆದು, ನೀ ಮನಂ ಇರಂಗಿ ಎಂಬ ವರ್ಣಮ್ ನಿಂದ ಮುಂದುವರೆಯಿತು.
ಈ ಒಂದು ಅದ್ಭುತವಾದ ವರ್ಣಮ್ನಲ್ಲಿ ನರ್ತಕಿಯರಿಬ್ಬರೂ ಅದ್ಭುತವಾಗಿ ಸುಬ್ರಹ್ಮಣ್ಯ ಸ್ವಾಮಿಯ ಲೀಲೆಗಳನ್ನು ಹಾಡಿ ಹೊಗಳಿದರು. ನರ್ತಕಿಯರ ಅದ್ಭುತವಾದ ನೃತ್ಯಕ್ಕೆ ಹಾಗೂ ಕ್ಲಿಷ್ಟಕರ ಜತ್ತಿಗಳಿಗೆ ವೀಕ್ಷಕರಿಂದ ಮೆಚ್ಚುಗೆಯ ಸುರಿಮಳೆ ಕೇಳಿ ಬಂದಿತು. ನಂತರ ಕುಮಾರಿ ಅನ್ವಿತಾ ರವರಿಂದ ನಡೆದ ಆಡಿದನು ರಂಗ ಎಂಬ ಅದ್ಭುತವಾದ ಕೃಷ್ಣನ ನೃತ್ಯವು ಜನರ ಮನಸೂರೆಗೊಂಡಿತು. ನಂದಿನಿ ಅವರಿಂದ ದೇವಿ ಸ್ತುತಿಯು ಅದ್ಭುತವಾಗಿ ಪ್ರದರ್ಶನಗೊಂಡಿತು.

ನಂತರ ಅಂತಪುರ ಗೀತೆಯಿಂದ ಮುಂದುವರೆದು ಇಲ್ಲಾನ ಮತ್ತು ಮಂಗಳದೊಂದಿಗೆ ಮುಕ್ತಾಯಗೊಂಡಿತು. ನಟುವಂಗಮ್ನಲ್ಲಿ ಗುರು ಬಾಲ ವಿಶ್ವನಾಥ್, ಹಾಡುಗಾರಿಕೆಯಲ್ಲಿ ವಿದ್ವಾನ್ ನವೀನ್ ಅಂದಗರ್, ಮೃದಂಗಂನಲ್ಲಿ ವಿದ್ವಾಂಸರಾದ ದಾಸಪ್ಪ, ವಯೋಲಿನ್ ವಿದ್ವಾನ್ ಯಶಸ್ವಿ ಹಾಗೂ ಕೊಳಲಿನಲ್ಲಿ ವಿದ್ವಾನ್ ಸಮೃದ್ಧ್ ಶ್ರೀನಿವಾಸ್ ಪಾಲ್ಗೊಂಡಿದ್ದರು.