ತುಮಕೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶಕ್ಕೋಸ್ಕರ ರಾಜಕಾರಣ ಮಾಡುತ್ತಿರುವ ಅದ್ವಿತೀಯ ನಾಯಕ. ಅವರ ಗುರಿ, ಚಿಂತನೆ, ಅಭಿವೃದ್ಧಿ ದೃಷ್ಟಿಕೋನ, ವಿಚಾರ, ಆದರ್ಶಗಳು ಅವರನ್ನು ವಿಶ್ವನಾಯಕರನ್ನಾಗಿ ಮಾಡಿವೆ. ಮೋದಿಯವರ ಬದ್ಧತೆಯ ಆಡಳಿತದಲ್ಲಿ ಭಾರತ ಇಂದು ಆರ್ಥಿಕವಾಗಿ ಜಗತ್ತಿನಲ್ಲಿ ನಾಲ್ಕನೇ ಸ್ಥಾನದಲ್ಲಿದೆ.ಒಂದೂ ಕಪ್ಪು ಚುಕ್ಕೆ ಇಲ್ಲದ ನಿಷ್ಕಳಂಕಿತ ವ್ಯಕ್ತಿತ್ವದ ನಾಯಕ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಹೇಳಿದರು.
ಪ್ರಧಾನಿ ಮೋದಿಯವರ 11 ವರ್ಷದ ಆಳಿತಾವಧಿಯ ಸಾಧನೆ ಕುರಿತು ಗುರುವಾರ ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದಅವರು, ಕಳೆದ 11 ವರ್ಷಗಳಲ್ಲಿ ಪ್ರಧಾನಿ ಮೋದಿಯವರ ಸರ್ಕಾರವು ದಶಕಗಳ ಜಡತ್ವ ಮುರಿದು ದಿಟ್ಟ ನಿರ್ಧಾರಗಳ ಮೂಲಕ ವಿಕಸಿತ ಭಾರತಕ್ಕೆ ಭದ್ರ ಬುನಾದಿ ಹಾಕಿದೆ.ದೇಶದ ಒಟ್ಟಾರೆ ಆರ್ಥಿಕ ಪ್ರಗತಿಗೆ ವ್ಯಾಪಕವಾಗಿ ಕೊಡುಗೆ ನೀಡಿದೆ. ವಿದೇಶಿ ನೇರ ಹೂಡಿಕೆ ಹರಿವನ್ನು ಹೆಚ್ಚಿಸುವುದು, ಉದ್ಯೋಗ ಸೃಷ್ಟಿ, ಹಣದುಬ್ಬರ ನಿಯಂತ್ರಣ, ಬಡತನ ನಿರ್ಮೂಲನ ಹಾಗೂ ತೆರಿಗೆ ಸಂಗ್ರಹಣೆಯ ಸುಧಾರಣೆಯಂತಹ ಪ್ರಮುಖ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದೆ ಎಂದರು.

ರಾಜ್ಯದಲ್ಲಿ 8 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಪ್ರಧಾನ ಮಂತ್ರಿ ಆವಾಸ್ಯೋಜನೆಯಡಿ ಮನೆಗಳನ್ನು ಮಂಜೂರು ಮಾಡಿ 4.48 ಲಕ್ಷಕ್ಕೂ ಹೆಚ್ಚು ಮನೆ ನಿರ್ಮಿಸಲಾಗಿದೆ.ರಾಜ್ಯದಲ್ಲಿ ಈಗಾಗಲೇ 1.5 ಕೋಟಿಗೂ ಹೆಚ್ಚು ಜನರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ರಕ್ಷಣೆ ನೀಡಿರುವ ಜೊತೆಗೆ ಇದೀಗ 70 ವರ್ಷ ಮೇಲ್ಪಟ್ಟ ಎಲ್ಲಾ ನಾಗರೀಕರಿಗೂ 5 ಲಕ್ಷ ರೂ.ಗಳ ಉಚಿತ ಚಿಕಿತ್ಸೆ ನೀಡುವ ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ರಾಜ್ಯದಲ್ಲಿ 1.86 ಕೋಟಿ ಜನ್ಧನ್ ಖಾತೆಗಳನ್ನು ತೆರೆಯಲಾಗಿದ್ದುಇದರಲ್ಲಿ 6 ಸಾವಿರ ಕೋಟಿಗೂ ಹೆಚ್ಚು ಹಣಜಮೆಯಾಗಿದೆ ಎಂದು ಹೇಳಿದರು.

ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನಯೋಜನೆಯಡಿ ರಾಜ್ಯದ ಜನರಿಗೆ 75 ಲಕ್ಷ ಮೆಟ್ರಿಕ್ ಟನ್ಗೂ ಹೆಚ್ಚು ಆಹಾರ ಧಾನ್ಯವನ್ನು ಉಚಿತವಾಗಿ ನೀಡಲಾಗುತ್ತಿದೆ.ಜಲಜೀವನ್ ಮಿಷನ್ನಲ್ಲಿ 74 ಲಕ್ಷ ಗ್ರಾಮೀಣ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕಒದಗಿಸಲಾಗಿದೆ.37.5 ಲಕ್ಷ ಬಿಪಿಎಲ್ ಕುಟುಂಬಗಳ ಮಹಿಳೆಯರಿಗೆ ಉಚಿತ ಎಲ್ಪಿಜಿ ಸಂಪರ್ಕ ನೀಡಲಾಗಿದೆ.ರಾಜ್ಯದ ಮಹಿಳೆಯರಿಗೆ ನೀಡಲಾದ 4.14 ಕೋಟಿ ಮುದ್ರಾ ಸಾಲಗಳಲ್ಲಿ ಶೇಕಡ 69ರಷ್ಟು ಮಹಿಳೆಯರೇ ಪಡೆದಿದ್ದಾರೆ.ಸುಕನ್ಯಾ ಸಮೃದ್ಧಿ ಯೋಜನೆಯಡಿ ಕರ್ನಾಟಕವೊಂದರಲ್ಲೇ 27.6 ಲಕ್ಷ ಖಾತೆಗಳನ್ನು ತೆರೆಯಲಾಗಿದೆ.ನವೋದ್ಯಮಗಳ ಬೆಳವಣಿಗೆಗೆ ಪ್ರೋತ್ಸಾಹ ನೀಡುವ ಮೂಲಕ ರಾಜ್ಯದಲ್ಲಿ 12,353 ಮಾನ್ಯತೆ ಪಡೆದ ಸ್ಟಾರ್ಟ್ಅಪ್ಗಳು ಕಾರ್ಯನಿರ್ವಹಿಸುತ್ತಿವೆ. ನಮ್ಮರಾಜ್ಯಕ್ಕೆ 1,845 ಕೋಟಿ ರೂ.ಗಳ ಬೃಹತ್ ಮೊತ್ತದ ಸಾಲ ಬಿಡುಗಡೆಯಾಗಿದ್ದು, ಇದರಿಂದ 7,940 ಫಲಾನುಭವಿಗಳು ಆರ್ಥಿಕವಾಗಿ ಸಬಲರಾಗಿದ್ದಾರೆಎಂದುರವಿಕುಮಾರ್ ಹೇಳಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್ಅವರು ಮೋದಿ ಸರ್ಕಾರ ತುಮಕೂರು ಜಿಲ್ಲೆಗೆ ಕೊಟ್ಟ ಕೊಡುಗೆಗಳನ್ನು ಸ್ಮರಿಸಿದರು. ಜಿಲ್ಲೆಯ ಬಹುದೊಡ್ಡದಾದ ಜಲಜೀವನ್ ಮಿಷನ್ ಮೂಲಕ ಮನೆಮನೆಗೆ ಕುಡಿಯುವ ನೀರು ನೀಡುವ ಯೋಜನೆ ನೀಡಿದೆ.ಮೋದಿ ಸರ್ಕಾರ ತುಮಕೂರು ನಗರಕ್ಕೆ ಸ್ಮಾರ್ಟ್ ಸಿಟಿ ಯೋಜನೆ ನೀಡಿ ನಗರದ ಅಭಿವೃದ್ಧಿಗೆ ನೆರವಾಗಿದೆ.ಅಮೃತ್ ಯೋಜನೆಯಡಿ ಕುಡಿಯುವ ನೀರು, ಒಳಚರಂಡಿಗೆ 200 ಕೋಟಿ ರೂ.ಗಳ ಅನುದಾನ ನೀಡಿದೆ. ಹೆಚ್ಎಎಲ್ಗೆ ಮೋದಿಯವರೇ ಶಂಸ್ಥಾಪನೆ ನೆರವೇರಿಸಿ, ಅವರೇ ಉದ್ಘಾಟನೆ ಮಾಡಿದ್ದಾರೆ. ಹೀಗೆ ಹತ್ತು ಹಲವು ಯೋಜನೆಗಳನ್ನು ಮೋದಿ ಸರ್ಕಾರ ಜಿಲ್ಲೆಗೆ ನೀಡಿದೆ ಎಂದು ಹೇಳಿದರು.

ಈ ವೇಳೆ ಸುರೇಶ್ ಗೌಡ,ಎಚ್.ಎಸ್.ರವಿಶಂಕರ್ ಹೆಬ್ಬಾಕ, ಡಾ.ಎಂ.ಆರ್.ಹುಲಿನಾಯ್ಕರ್, ವೈ.ಹೆಚ್.ಹುಚ್ಚಯ್ಯ, ಸಂದೀಪ್ಗೌಡ, ಹೆಚ್.ಎ.ಆಂಜನಪ್ಪ, ಸಾಗರನಹಳ್ಳಿವಿಜಯಕುಮಾರ್, ಜಿಲ್ಲಾ ವಕ್ತಾರ ಟಿ.ಆರ್.ಸದಾಶಿವಯ್ಯ, ಮಾಧ್ಯಮ ಪ್ರಮುಖ್ ಜೆ.ಜಗದೀಶ್ ಮೊದಲಾದವರು ಭಾಗವಹಿಸಿದ್ದರು.
– ಕೆ.ಬಿ.ಚಂದ್ರಚೂಡ