ತುಮಕೂರು-ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಡಾ|| ಬಿ.ಆರ್.ಅಂಬೇಡ್ಕರ್ ಅವರ ಧರ್ಮಪತ್ನಿ ರಮಾಬಾಯಿ ರವರ ಪರಿನಿರ್ವಾಣ ದಿವಸ್ ಆಚರಣೆ

ತುಮಕೂರು : ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಮತ್ತು ಅಖಿಲ ಭಾರತ ಡಾ|| ಅಂಬೇಡ್ಕರ್ ಪ್ರಚಾರ ಸಮಿತಿಯ ವತಿಯಿಂದ ಇಂದು ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಡಾ|| ಬಿ.ಆರ್.ಅಂಬೇಡ್ಕರ್ ಅವರ ಧರ್ಮಪತ್ನಿಯಾದ ಲೇಟ್ ರಮಾಬಾಯಿ ಅವರ ಪರಿನಿರ್ವಾಣ ದಿವಸ್ ಆಚರಣೆಯನ್ನು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರ ಮೂಲಕ ಹಮ್ಮಿಕೊಳ್ಳಲಾಗಿತ್ತು.

ರಮಾಬಾಯಿರವರ ಪರಿನಿಬ್ಬಾಣ ದಿವಸ್ ಕುರಿತು ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಮತ್ತು ಅಖಿಲ ಭಾರತ ಡಾ|| ಅಂಬೇಡ್ಕರ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್‌ರವರು ಮಾತನಾಡಿ, ರಮಾಬಾಯಿರವರು ವಿಧಿವಶರಾದ ಐದು ವರ್ಷಗಳ ತರುವಾಯ ಡಾ. ಬಿ.ಆರ್.ಅಂಬೇಡ್ಕರರು ‘ದಿ ಪಾರ್ಟಿಷನ್ ಆಫ್ ಇಂಡಿಯಾ’ ಎಂಬ ವಿದ್ವತ್ ಪೂರ್ಣ ಗ್ರಂಥವನ್ನು ಬರೆದು ಅದನ್ನು ಅವರ ಪತ್ನಿ ರಮಾಬಾಯಿ ಅವರಿಗೆ ಸಮರ್ಪಿಸಿದರು.

ಈ ಕೃತಿಯು 19ನೇ ಶತಮಾನದಲ್ಲಿ ಪತ್ನಿಯೊಬ್ಬರಿಗೆ ಸಮರ್ಪಣೆ ಮಾಡಿದ ಮೊಟ್ಟ ಮೊದಲ ಕೃತಿ ಎನ್ನಲಾಗಿದೆ. ಅಂಬೇಡ್ಕರ್‌ರವರಿಂದ ರಚಿತವಾದ ಆ ಕೃತಿಯನ್ನು ರಮಾಬಾಯಿ ಅವರಿಗೆ ಸಮರ್ಪಿಸುವ ಸಲುವಾಗಿ ನಾಲ್ಕು ಸಾಲುಗಳನ್ನು ಬರೆಯುತ್ತಾ ‘ಆಕೆಯ ಹೃದಯ ಸೌಜನ್ಯತೆ ಹಾಗೂ ಪರಿಶುದ್ಧ ಶೀಲ ಮತ್ತು ನಮಗೆ ಯಾವುದೇ ಹಿತಚಿಂತಕರು ಇಲ್ಲದಿದ್ದ ಆ ದಿನಗಳಲ್ಲಿ ನಮ್ಮ ಪಾಲಿಗೆ ಬಂದಿದ್ದ ಬಡತನ ಮತ್ತು ಸಂಕಷ್ಟಗಳಲ್ಲಿ ಕಾಂತಚಿತ್ತದಿಂದ ಮನಪೂರ್ವಕವಾಗಿ ನನ್ನನ್ನು ಸಂತೈಸುತ್ತ ಸಹಕರಿಸಿದ ರಮಾಗೆ’ ಈ ಕೃತಿ ಸಮರ್ಪಿತ ಎಂದು ಭಾವುಕರಾಗಿ ಬರೆದಿದ್ದಾರೆ.

ಈ ಎಳೆಯನ್ನು ಹಿಡಿದು ಹೊರಟಾಗ ರಮಾಬಾಯಿ ಚರಿತ್ರೆಯನ್ನು ಕೂಡ ಇತಿಹಾಸ ಮರೆಮಾಚಬಾರದೆನಿಸಿತು. ರಮಾಬಾಯಿ ಅವರ ಜೀವನವೂ ಕೂಡ ತಲ್ಲಣಗಳನ್ನು ಸೃಷ್ಟಿಮಾಡುವ ಸಾಮಾಜಿಕ ಕ್ರೂರತೆಯನ್ನು ಬಿಂಬಿಸುವ ರೀತಿಯಲ್ಲಿ ಇಂದಿನ ಸಮಾಜಕ್ಕೆ ಮಾದರಿ ಎನಿಸಿದೆ. ಮಾನವ ಪ್ರೇಮಿ ಅಂಬೇಡ್ಕರರ ಮಹಾ ಮಾನವತಾ ಹೋರಾಟಕ್ಕೆ ರಮಾಬಾಯಿ ಅವರ ತ್ಯಾಗ ಅನನ್ಯವಾಗಿದೆಂದು ಉಲ್ಲೇಖಿಸಿದ್ದಾರೆ. ಅಲ್ಲದೇ ತಮ್ಮ ಶ್ರೀಮತಿಯವರು ಪಟ್ಟ ತ್ಯಾಗ, ಪರಿಶ್ರಮ ಅನುಭವಿಸಿದ ನೋವು, ಹಸಿವು, ನಿದ್ರಾಹೀನತೆ, ಕ್ರೂರ ಬಡತನ, ನಿಂದನೆ, ತನ್ನ ಮಕ್ಕಳ ಸಾವಿನ ಆಕ್ರಂದನಗಳನ್ನು ತಾನೇ ನುಂಗಿಕೊಂಡು ಅಂಬೇಡ್ಕರರಿಗೂ ತಾಯಿತನ ತುಂಬಿದ್ದೇ ಅಂಬೇಡ್ಕರ್‌ರವರ ಈ ಮಟ್ಟದ ಸಾಧನೆಗೆ ಕಾರಣವಾಗಿತ್ತು ಬಹುಶಃ ಅದಕ್ಕೆ ಡಾ.ಅಂಬೇಡ್ಕರ್ ಹೇಳಿರಬೇಕು ‘ವೈಫ್ ನಥಿಂಗ್ ಬಟ್ ಮದರ್’ ಹೆಂಡತಿ ಎಂದರೆ ‘ಬಾಳಸಂಗಾತಿಯಲ್ಲ ಆಕೆ ತಾಯಿಯೂ ಕೂಡ, ಆಕೆ ಬದುಕಿನ ಬಹುದೊಡ್ಡ ಗೆಳತಿ’ ಎಂದು. ರಮಾಬಾಯಿ ಅವರನ್ನು ಕೈಹಿಡಿದಿದ್ದೇ ಅಂಬೇಡ್ಕರ್ ಅವರಿಗೆ ಮೊದಲ ಗೆಲುವು, ಆಕೆಯಲ್ಲದೇ ಮತ್ಯಾರೂ ಆ ಕ್ರೂರ ಬದುಕನ್ನು ಸಹಿಸಲಾಗುತ್ತಿರಲಿಲ್ಲ. ಅದನ್ನು ಅಂಬೇಡ್ಕರ್ ಅವರೇ ಒಪ್ಪಿಕೊಂಡಿದ್ದರು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಮತ್ತು ಅಖಿಲ ಭಾರತ ಡಾ|| ಅಂಬೇಡ್ಕರ್ ಪ್ರಚಾರ ಸಮಿತಿಯ ಜಿಲ್ಲಾ ಕಾರ್ಯಧ್ಯಕ್ಷರಾದ ಕೆಸ್ತೂರು ನರಸಿಂಹಮೂತಿರವರು ಮಾತನಾಡಿ, ಜಗತ್ತಿನ ಮಹಾಪುರುಷನ ಕೈಹಿಡಿದ ಯಾವ ಹೆಣ್ಣು ಕೂಡ ಅನುಭವಿಸದೇ ಇರುವ ಯಾತನೆಯನ್ನು ರಮಾಬಾಯಿ ಅಂಬೇಡ್ಕರ್ ಅವರು ಅನುಭವಿಸಿದ್ದರು. ಅವರ ನಾಲ್ಕು ಮಕ್ಕಳ ಸಾವಿನ ಸಂದರ್ಭಗಳಲ್ಲಿ ಅನುಭವಿಸಿದ್ದು ಕರಾಳ ಕ್ಷಣಗಳು ಎನ್ನಲಾಗಿದ್ದು, ಅಂಬೇಡ್ಕರರು ಎರಡು ಮಕ್ಕಳ ಸಾವಿನ ಸಂದರ್ಭದಲ್ಲಿ ವಿದೇಶದಲ್ಲಿದ್ದರು, ಅಲ್ಲದೇ ಅವರ ನಾಲ್ಕು ಮಕ್ಕಳ ಸಾವಿನಲ್ಲಿ ಇಬ್ಬರು ಮಕ್ಕಳ ಮುಖವನ್ನೇ ನೋಡಲಾಗಲಿಲ್ಲ, ಅಂತಹ ಸನ್ನಿವೇಶಗಳು ಎದುರಾಗಿದ್ದವಲ್ಲದೇ, ತಮ್ಮ ಪುತ್ರ ರಮೇಶ ವಿಧಿವಶರಾದಾಗ ಅಂಬೇಡ್ಕರ್‌ರವರು ಅಮೆರಿಕದಲ್ಲಿದ್ದರು. ಗಂಗಾಧರ ವಿಧಿವಶರಾದಂತಹ ಸಂದರ್ಭದಲ್ಲಿ ಇಂಗ್ಲೆಂಡ್‌ನಲ್ಲಿದ್ದರು, ಮಗಳು ಇಂದು, ಕೊನೆಯ ಮಗ ರಾಜರತ್ನ ವಿಧಿವಶರಾದಂತಹ ಸಂದರ್ಭದಲ್ಲಿ ಅವರುಗಳನ್ನು ಅಪ್ಪಿ ಮುದ್ದಾಡಿ ಭಾವುಕರಾಗಿ ಅತ್ಯಂತ ದುಃಖಬ್ರಾಂತರಾಗಿ ಚಿಕ್ಕ ಮಗುವಿನಂತೆ ಅತ್ತ ಸನ್ನಿವೇಶಗಳನ್ನು ಸಹ ಅಂಬೇಡ್ಕರ್‌ರವರಿಂದ ರಚಿತವಾದ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿಸಿದರು.

ಇಂತಹ ಸನ್ನಿವೇಶಗಳು ಅವರಿಗೆ ಎದುರಾಗಿದ್ದರೂ ಸಹ ನಮ್ಮ ಭವ್ಯ ಭಾರತದ ನಿರ್ಮಾಣಕ್ಕೆ ಅವರು ಹಾಕಿಕೊಟ್ಟ ಅಡಿಪಾಯ ನಿಜಕ್ಕೂ ಶ್ಲಾಘನೀಯ, ಅವರು ಕೋಟ್ಯಾಂತರ ಜನರ ಕಣ್ಣಿರನ್ನೊರೆಸುವ ಅಭಿವ್ಯಕ್ತಿಯಾಗಿ ಇಂದು ನಮ್ಮೆಲ್ಲರ ಆರಾಧ್ಯ ದೈವರಾಗಿರುವುದಕ್ಕೆ ಮೂಲ ಕಾರಣ ಅವರ ಪತ್ನಿ ರಮಾಭಾಯಿರವರು ಅವರ ಪರಿನಿಬ್ಬಾಣ ದಿವಸ್‌ನ್ನು ಆಚರಿಸುತ್ತಿದ್ದೇವೆ ಎಂದು ಭಾವುಕರಾದರು.

ಮುಖ್ಯ ಅತಿಥಿಗಳಾಗಿ ಅಗಮಿಸಿದ್ದ ಡಾ|| ಎಪಿಜೆ ಅಬ್ದುಲ್ ಕಲಾಂ ಫೌಂಡೇಷನ್ & ಅಕಾಡಮಿಯ ಮುಖ್ಯಸ್ಥರಾದ ನಿಸಾರ್ ಅಹಮ್ಮದ್‌ರವರು ಕಾರ್ಯಕ್ರಮದ ಕುರಿತು ಮಾತನಾಡಿ, ರಮಾಭಾಯಿ ಅಂಬೇಡ್ಕರ್‌ರವರು ತಮ್ಮ ಪತಿಯಾದ ಅಂಬೇಡ್ಕರ್‌ರವರ ಅನುಪಸ್ಥಿತಿಯಲ್ಲಿ ತನ್ನ ಆಭರಣಗಳನ್ನು ಮಾರಿ ತಮ್ಮ ಮಕ್ಕಳ ಶವಸಂಸ್ಕಾರವನ್ನು ಮಾಡಿದ ಸ್ಥಿತಿ ಯಾವೊಬ್ಬ ಭಾರತೀಯ ಪುರಷನ ಹೆಂಡತಿಗೂ ಬಂದಿರಲಾರದು. ಅಂಬೇಡ್ಕರ್‌ರವರ ಪ್ರತಿಯೊಂದು ಕಾರ್ಯದಲ್ಲೂ ನೆರಳಾಗಿ ನಿಂತು ಅವರಿಗೆ ಪ್ರೇರಪಣೆಯಾಗಿದ್ದರು ಎನ್ನಲಾಗಿದೆ, ಜೊತೆಗೆ ರಮಾಭಾಯಿ ಅವರು ಎಂದಿಗೂ ಹೊರ ಜಗತ್ತಿಗೆ ಕಾಣಿಸಿಕೊಳ್ಳದೇ ಅಂಬೇಡ್ಕರ್‌ರವರ ಪ್ರತಿಯೊಂದು ಕಾಯಕದಲ್ಲಿಯೂ ಮುಂಚೂಣಿಯಲ್ಲಿದ್ದರು, ತಮ್ಮ ಸಂಸಾರದಲ್ಲಿ ಎಷ್ಟೋ ಕಷ್ಟಗಳು, ಕಿರುಕುಳ, ಬಡತನ ಸೇರಿದಂತೆ, ಸಮಾಜದ ದೂಷಣೆ, ಮಕ್ಕಳು ಮನೆಯನ್ನು ಬಿಟ್ಟು ಹೊರ ಹೋಗಿದ್ದು ಸೇರಿದಂತೆ ಅನೇಕ ಕಷ್ಟಗಳನ್ನು ರಮಾಭಾಯಿರವರೇ ಅನುಭವಿಸಿದ್ದಂತಹ ವ್ಯಕ್ತಿ, ಏಕೆಂದರೆ ಅಂಬೇಡ್ಕರ್‌ರವರು ಆ ಸಮಯದಲ್ಲಿ ಅತ್ಯಂತ ಏಕಾಂತದಲ್ಲಿ ಭಾರತದ ಸಂವಿಧಾನ ರಚನೆಯ ಕಾರ್ಯದಲ್ಲಿ ತುಂಬಾ ಸಮಯವನ್ನು ಕಳೆಯುತ್ತಿದ್ದರು, ಅದಕ್ಕೆ ಯಾವುದೇ ತರಹದ ಧಕ್ಕೆಯುಂಟಾಗ ಬಾರದೆಂಬ ಕಾರಣಕ್ಕೆ ರಮಾಭಾಯಿ ಅವರು ಎಲ್ಲಾ ನೋವನ್ನು ತಮ್ಮಲ್ಲೇ ಇಟ್ಟುಕೊಂಡು ಸಂಸಾರವನ್ನು ನಿಭಾಯಿಸಿದ ಮಹಾನ್ ತಾಯಿ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಅಖಿಲ ಭಾರತ ಡಾ|| ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ತುಮಕೂರು ಜಿಲ್ಲಾಧ್ಯಕ್ಷರು ಎನ್.ಕೆ ನಿಧಿ ಕುಮಾರ್, ಜಿಲ್ಲಾ ಕಾರ್ಯಾಧ್ಯಕ್ಷರಾದ ಕೆಸ್ತೂರು ನರಸಿಂಹಮೂರ್ತಿ, ಜಿಲ್ಲಾ ಉಪಾಧ್ಯಕ್ಷರಾದ ಲಕ್ಷ್ಮಿನಾರಾಯಣ್ ಎಸ್., ವಿದ್ಯಾರ್ಥಿ ಘಟಕದ ಜಿಲ್ಲಾ ಅಧ್ಯಕ್ಷರಾದ ಕಿರಣ್ ವೈ.ಎಸ್., ತುಮಕೂರು ನಗರದ ಅಧ್ಯಕ್ಷರಾದ ಮನು ಟಿ.ಎಲ್., ಅಲ್ಪಸಂಖ್ಯಾತರ ಘಟಕದ ತಾಲೂಕು ಅಧ್ಯಕ್ಷರಾದ ಜೆಬಿನೇಶನ್, ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಅಧ್ಯಕ್ಷರಾದ ಇಲ್ಲಾಸ್ ಅಹ್ಮದ್, ಅಲ್ಪಸಂಖ್ಯಾತರ ಯುವಘಟಕದ  ಜಿಲ್ಲಾ ಅಧ್ಯಕ್ಷರಾದ ಮೋಹಿನ್ ಅಹ್ಮದ್, ಡಾ|| ಎ.ಪಿ.ಜಿ ಅಬ್ದುಲ್ ಕಲಾಂ ಫೌಂಡೇಶನ್ ಅಂಡ್ ಅಕಾಡೆಮಿ ಮುಖ್ಯಸ್ಥರಾದ ನಿಸಾರ್ ಅಹ್ಮದ್, ಮುಖಂಡರುಗಳಾದ ರವಿಕುಮಾರ್, ಪ್ರಸನ್ನ ಗೂಳೂರು,  ಅಬ್ದುಲ್ ರೆಹಮಾನ್, ಇಲಿಯಾಜ್ ಅಹಮದ್, ಮುಗದಮ್ ಶರೀಫ್, ನೂರುಲ್ಲಾ ಸಾಬ್, ಗುಲ್ಜಾರ್ ಅಹಮದ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *