ತುಮಕೂರು- ಜಾನುವಾರುಗಳಿಗಾಗಿ ಸಂಗ್ರಹಿಸಿ ಬಣವೆ ಹಾಕಿದ್ದ ಮೇವಿನ ಹುಲ್ಲಿನ ಬಣವೆಗೆ ಬೆಂಕಿ ಬಿದ್ಪರಿಣಾಮ ಬಣವೆ ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ತಾಲ್ಲೂಕಿನ ಹಾಲುಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ತಾಲ್ಲೂಕಿನ ಗೂಳೂರು ಹೋಬಳಿಯ ಹಾಲುಹೊಸಹಳ್ಳಿ ಗ್ರಾಮದ ರೈತ ರಂಗಸ್ವಾಮಿ ಎಂಬುವರಿಗೆ ಸೇರಿದ ಹುಲ್ಲಿನ ಬಣವೆ ಬೆಂಕಿಗೆ ಆಹುತಿಯಾಗಿದೆ. ರೈತ ರಂಗಸ್ವಾಮಿ ಅವರು ಹಿತ್ತಲಲ್ಲಿ ಜಾನುವಾರುಗಳ ಮೇವಿಗಾಗಿ ರಾಗಿ ಹುಲ್ಲನ್ನು ಸಂಗ್ರಹಿಸಿ ಬಣವೆ ಹಾಕಿದ್ದರು. ಈ ಬಣವೆಗೆ ಬೆಂಕಿ ಬಿದ್ದು ಹೊಗೆಯಾಡುತ್ತಿರುವುದು ಕಂಡು ಬಂದಿದೆ. ತಕ್ಷಣ ಇದನ್ನು ನೋಡಿದ ರಂಗಸ್ವಾಮಿ ಮನೆಯವರು ಅಕ್ಕಪಕ್ಕದ ತೋಟದವರಿಗೂ ಮಾಹಿತಿ ತಿಳಿಸಿದ್ದಾರೆ.

ತಕ್ಷಣ ಸ್ಥಳಕ್ಕೆ ಓಡಿ ಬಂದ ಅಕ್ಕಪಕ್ಕದ ತೋಟದವರೆಲ್ಲಾ ಸೇರಿ ಹುಲ್ಲಿನ ಬಣವೆಗೆ ಬಿದ್ದಿದ್ದ ಬೆಂಕಿಯನ್ನು ನಂದಿಸಲು ಯತ್ನಿಸಿದರಾದರೂ ಬೆಂಕಿ ಹೊತ್ತಿ ಉರಿಯುವುದು ಜಾಸ್ತಿಯಾಗಿದೆ. ತಕ್ಷಣ ಅಗ್ನಿಶಾಮಕ ಠಾಣೆಗೆ ದೂರವಾಣಿ ಕರೆ ಮಾಡಿ ಸುದ್ದಿ ಮುಟ್ಟಿಸಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿ ಅಗ್ನಿಶಾಮಕ ದಳದ ಸಿಬ್ಬಂದಿ ಬಣವೆಯಲ್ಲಿ ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸಿದರಾದರೂ ಅಷ್ಟರಲ್ಲಿ ಹುಲ್ಲಿನ ಬಣವೆ ಸಂಪೂರ್ಣ ಸುಟ್ಟು ಹೋಗಿತ್ತು.
ಬೆಂಕಿಗೆ ಆಹುತಿಯಾಗಿರುವ ಜಾನುವಾರುಗಳ ಮೇವಿನ ಮೌಲ್ಯ ಸುಮಾರು 1 ಲಕ್ಷಕ್ಕೂ ಅಧಿಕ ಎಂದು ಅಂದಾಜಿಸಲಾಗಿದೆ.
ಜಾನುವಾರುಗಳ ಮೇವಿಗಾಗಿ ಸಂಗ್ರಹಿಸಿಟ್ಟಿದ್ದ ಹುಲ್ಲು ಬೆಂಕಿಗೆ ಆಹುತಿಯಾಗಿರುವ ಹಿನ್ನೆಲೆಯಲ್ಲಿ ರಾಸುಗಳಿಗೆ ಮೇವು ಸಂಗ್ರಹಿಸಲು ರೈತ ರಂಗಸ್ವಾಮಿ ಅವರು ಪರದಾಡುವಂತಾಗಿದೆ.

ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.