ತುಮಕೂರು: ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವು ಮುಂದಿನ ದಿನಗಳಲ್ಲಿ ಮೊದಲ ಸ್ಥಾನಕ್ಕೆ ಬಂದೇ ಬರುತ್ತದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ಹೇಳಿದರು.
ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಜಿಪಿಟಿ ಹಳೆಯ ವಿದ್ಯಾರ್ಥಿಗಳ ಸಂಘವು ನೂತನವಾಗಿ ನಿರ್ಮಿಸಿರುವ ಕಲ್ಪವೃಕ್ಷ ಸಭಾಂಗಣದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಆಧುನಿಕವಾಗಿ ಭಾರತ ಬಹಳ ವೇಗವಾಗಿ ಬದಲಾಗುತ್ತಿದೆ. ಯಾವುದೇ ದೇಶಕ್ಕೆ ಹೋದರೂ ಭಾರತದ ತಾಂತ್ರಿಕ ಪದವೀಧರರು ಸಿಗುತ್ತಾರೆ. ಸಂಶೋಧನಾ ಕೇಂದ್ರವಾದ ನಾಸಾದಲ್ಲಿ ಶೇ.2೦ರಷ್ಟು ವಿಜ್ಞಾನಿಗಳು ಭಾರತದವರಿದ್ದಾರೆ. ಹೀಗಾಗಿಯೇ ಪ್ರಪಂಚದ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವನ್ನು ಗುರುತಿಸುತ್ತಿದ್ದಾರೆ. ತಾಂತ್ರಿಕ ಶಿಕ್ಷಣದಲ್ಲಿ ಪಾಲಿಟೆಕ್ನಿಕ್ ಬಹುಮುಖ್ಯವಾದ ಅಂಗ. ಕರ್ನಾಟಕವು ತಾಂತ್ರಿಕ ಶಿಕ್ಷಣ ನೀಡುವುದರಲ್ಲಿ ಮುಂದೆ ಇದೆ ಎಂದರು.
ದೇಶದಲ್ಲಿ ತಾಂತ್ರಿಕ ಪದವಿಧರರನ್ನು ಉತ್ಪಾದಿಸುವುದರಲ್ಲಿ ಕರ್ನಾಟಕ 4ನೇ ಸ್ಥಾನದಲ್ಲಿದೆ. ನಮ್ಮ ರಾಜ್ಯ ನೀಡುತ್ತಿರುವ ಗುಣಮಟ್ಟದ ಶಿಕ್ಷಣದಿಂದ ಹೆಚ್ಚು ಪ್ರಾತಿನಿಧ್ಯ ಸಿಕ್ಕಿದೆ. ಇಂಜಿನಿಯರಿಂಗ್, ಪಾಲಿಟೆಕ್ನಿಕ್ ವಿದ್ಯಾರ್ಥಿಗಳನ್ನು ಇಡೀ ವಿಶ್ವದಲ್ಲಿ ಮೊದಲ ಆದ್ಯತೆಯಲ್ಲಿ ಗುರುತಿಸುತ್ತಾರೆ. ರಾಜ್ಯದಲ್ಲಿ ಯಾವುದೇ ಸರ್ಕಾರ ಇರಬಹುದು. ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಾ ಬಂದಿವೆ ಎಂದು ಹೇಳಿದರು.
ಸ್ವಾತಂತ್ರ್ಯದ ನಂತರ ನಮ್ಮ ಹಿರಿಯರು ದೂರದೃಷ್ಟಿ ಇಟ್ಟುಕೊಂಡು, ಬಲಿಷ್ಟ ಭಾರತ ಕಟ್ಟಲು ಹಲವು ಯೋಜನೆಗಳನ್ನು ನೀಡಿದ್ದಾರೆ. ಯೋಜನಾ ಆಯೋಗದ ಅಧ್ಯಕ್ಷರಾಗಿದ್ದ ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರು ಶಿಕ್ಷಣ ಮತ್ತು ಕೈಗಾರಿಕೆಗೆ ಆದ್ಯತೆ ನೀಡಿದರು.

ಯುವಕರನ್ನು ಕೈಗಾರಿಕೆಗೆ ಸೇರಿಸುವ ನಿಟ್ಟಿನಲ್ಲಿ ತರಬೇತಿ ನೀಡಲು ಐಟಿಐ, ಪಾಲಿಟೆಕ್ನಿಕ್ ಕಾಲೇಜುಗಳನ್ನು ಪ್ರಾರಂಭಿಸಿದರು. ದೇಶದಲ್ಲಿ ಇಂದಿಗೂ ಸಾವಿರಾರು ಪಾಲಿಟೆಕ್ನಿಕ್ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಜವಾಹರ್ ಲಾಲ್ ನೆಹರು ಅವರು ಉದ್ಘಾಟಿಸಿರುವ ತುಮಕೂರಿನ ಸರ್ಕಾರಿ ಪಾಲಿಟೆಕ್ನಿಕ್ ಸಾವಿರಾರು ಯುವಕರಿಗೆ ಭವಿಷ್ಯ ಕಲ್ಪಿಸಿದೆ ಎಂದರು.
ರಾಜ್ಯದ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ 1.50 ಲಕ್ಷ ವಿದ್ಯಾರ್ಥಿಗಳು ದಾಖಲಾತಿ ಹೊಂದಲು ಅವಕಾಶವಿದೆ. ಆದರೆ, 60 ಸಾವಿರ ವಿದ್ಯಾರ್ಥಿಗಳು ಮಾತ್ರ ದಾಖಲಾಗುತ್ತಿದ್ದಾರೆ. ಡಿಪ್ಲೋಮಾ ಕೋರ್ಸುಗಳು ತಕ್ಷಣ ಕೆಲಸ ಸಿಗುವ ಕೋರ್ಸ್ ಆಗಿರುವುದರಿಂದ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ತೋರಬೇಕು. ಸೈಬರ್ ಸೆಕ್ಯೂರಿಟಿ, ಡೇಟಾ ಮ್ಯಾನೇಜ್ಮೆಂಟ್, ಎಐ ತಂತ್ರಜ್ಞಾನಕ್ಕೆ ಬೇಡಿಕೆ ಇದೆ. ಈ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ತುಮಕೂರಿನ ರಾಮಕೃಷ್ಣ ಆಶ್ರಮದ ಶ್ರೀ ವೀರೇಶಾನಂದ ಸ್ವಾಮೀಜಿ ಮಾತನಾಡಿ, ಹಳೆಯ ವಿದ್ಯಾರ್ಥಿಗಳಿಂದ ಈ ರೀತಿಯ ಶ್ರೇಷ್ಠ ಕೊಡುಗೆ ಶಿಕ್ಷಣ ಸಂಸ್ಥೆಯ ಬೆಳವಣಿಗೆಗೆ ದಿಕ್ಕು ತೋರಿಸುತ್ತದೆ. ಈ ಸಭಾಂಗಣ ಹಲವು ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ವೇದಿಕೆಯಾಗಲಿದೆ ಎಂದು ಹೇಳಿದರು. ತಾಂತ್ರಿಕ ವಿದ್ಯೆ ಕೇವಲ ಉದ್ಯೋಗಕ್ಕಾಗಿ ಮಾತ್ರವಲ್ಲ. ಹಲವಾರು ಸಮಸ್ಯೆಗಳಿಗೆ ಪರಿಹಾರ ಕೊಡುವ ಮಾರ್ಗವೂ ಆಗಬೇಕು. ಕಲಿತ ವಿದ್ಯೆಯನ್ನು ಸಮಾಜದ ಹಿತಕ್ಕಾಗಿ ಉಪಯೋಗಿಸಬೇಕು ಎಂದು ತಿಳಿಸಿದರು.
ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ ವಿದ್ಯೆ ಎಂಬುದು ಬದುಕಿಗೆ ಬೆಳಕು ತೋರುವ ಶಕ್ತಿ. ಇಂತಹ ಸಭಾಂಗಣಗಳು ವಿದ್ಯಾರ್ಥಿಗಳಲ್ಲಿನ ಕೌಶಲ್ಯ, ಶಿಸ್ತು ಹಾಗೂ ಮೌಲ್ಯಾಧಾರಿತ ಶಿಕ್ಷಣದ ಬೆಳವಣಿಗೆಗೆ ಸಹಕಾರಿಯಾಗುತ್ತವೆ. ಹಳೆಯ ವಿದ್ಯಾರ್ಥಿಗಳು ತಾವು ಕಲಿತ ಶಿಕ್ಷಣ ಸಂಸ್ಥೆಯ ಬಗ್ಗೆ ತೋರಿದ ಬದ್ಧತೆ ನಿಜಕ್ಕೂ ಪ್ರೇರಣಾದಾಯಕ. ಶ್ರಮ, ನಿಷ್ಠೆ ಮತ್ತು ಗುರುಭಕ್ತಿ ಈ ಮೂರರಿಂದ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದೆಂದು ತಿಳಿಸಿದರು.

ನಗರ ಶಾಸಕ ಜಿ.ಬಿ. ಜ್ಯೋತಿ ಗಣೇಶ್ ಮಾತನಾಡಿ, ಹಳೆಯ ವಿದ್ಯಾರ್ಥಿಗಳ ಕೊಡುಗೆ ಅಪಾರವಾದದ್ದು. ಇಂತಹ ಕೊಡುಗೆಗಳಿಂದ ಈಗಿನ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗುತ್ತದೆ. ಹಲವು ಐಟಿಐ ಕಾಲೇಜುಗಳು ಶೆಡ್ಗಳಲ್ಲಿ ತರಗತಿಗಳನ್ನು ನಡೆಸುತ್ತಿವೆ. ಅವುಗಳಿಗೆ ಹೊಸ ಕಟ್ಟಡಗಳನ್ನು ನಿರ್ಮಿಸಲು ಸಚಿವರಿಗೆ ಮನವಿ ಮಾಡಿದರು.
ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಮೇಜರ್ ಅನಿಲ್ ಕುಮಾರ್, ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಹೆಚ್ಚಿನದಾಗಿ ವಿದ್ಯಾಭ್ಯಾಸ ಮಾಡುತ್ತಿರುವವರು ಬಡತನ ರೇಖೆಗಿಂತ ಕೆಳಗಿರುವ ವಿದ್ಯಾರ್ಥಿ/ವಿದ್ಯಾರ್ಥಿನಿಯರೇ ಹೆಚ್ಚು. ಅವರ ಭವ್ಯ ಭವಿಷ್ಯವನ್ನು ರೂಪಿಸಿಕೊಳ್ಳಲು ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದು, ಪ್ರಪಂಚದ ಮೂಲೆ-ಮೂಲೆಗಳಲ್ಲಿ ನಮ್ಮ ವಿದ್ಯಾರ್ಥಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಪಿಟಿ ಹಳೆಯ ವಿದ್ಯಾರ್ಥಿಗಳ ಸಂಘದ ಸಂಸ್ಥಾಪಕ ಪ್ರಕಾಶ್ ಸಿ.ಎಸ್. ಅಧ್ಯಕ್ಷ ಗೋಪಾಲಕೃಷ್ಣ ಎನ್., ಕಾರ್ಯದರ್ಶಿ ರಮೇಶ್ ಸಿ.ಎಸ್., ಡಿಸಾ ಇಂಡಿಯಾ ಲಿಮಿಟೆಡ್ ಅಸೋಷಿಯೇಟ್ ವೈಸ್ ಪ್ರೆಸಿಡೆಂಟ್ ಸ್ಟೇಪಿಸ್ ಉದಯ್ ಕುಮಾರ್, ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ನಿಂದ ಹೊರತಂದಿರುವ “ನೈದಿಲೆ” ವಾರ್ಷಿಕ ಸಂಚಿಕೆ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಪಾಲಿಟೆಕ್ನಿಕ್ ಕಾಲೇಜಿನ ೨೦೨೪-೨೫ನೇ ವಾರ್ಷಿಕ ವರದಿಯನ್ನು ತೇಜಸ್ ವಾಚಿಸಿದರು. ಸರ್ಕಾರಿ ಪಾಲಟೆಕ್ನಿಕ್ನಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ ಅಧ್ಯಾಪಕ ಹಾಗೂ ಪ್ರಾಧ್ಯಾಪಕರಿಗೆ ಗುರುವಂದನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.