ತುಮಕೂರು ಫೆ.೧: ನವದೆಹಲಿಯ ಕೌನ್ಸಿಲ್ ಫಾರ್ ಮೀಡಿಯಾ ಅಂಡ್ ಸ್ಯಾಟಿಲೈಟ್ ಬ್ರಾಡ್ಕಾಸ್ಟಿಂಗ್ (ಸಿಎಂಎಸ್ಬಿ) ಸಂಸ್ಥೆಯು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜಂಟಿ ನಿರ್ದೇಶಕ ಸಿದ್ದೇಶ್ವರಪ್ಪ ಜಿ.ಬಿ. ಅವರಿಗೆ ಅತ್ಯುತ್ತಮ ಕ್ಷೇತ್ರ ಪ್ರಚಾರಾಧಿಕಾರಿ ಪ್ರಶಸ್ತಿ ನೀಡಿ ಗೌರವಿಸಿದೆ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳ ಕುರಿತು ಮೈಸೂರು ದಸರಾ, ಕೃಷಿ ಮೇಳ, ಉತ್ಸವಗಳಲ್ಲಿ ವಸ್ತು ಪ್ರದರ್ಶನ, ಬೀದಿನಾಟಕ, ಜನಪದ ಸಂಗೀತದ ಮೂಲಕ ಜನಜಾಗೃತಿ, ಸಾಂಸ್ಕೃತಿಕ ನಾಯಕ ಬಸವಣ್ಣ, ಮಹಾತ್ಮ ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ೧೯೨೪ರಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ‘ಗಾಂಧಿ ಭಾರತ’ ಕಾರ್ಯಕ್ರಮ ಆಯೋಜನೆ ಸೇರಿದಂತೆ ಕ್ಷೇತ್ರ ಪ್ರಚಾರ ಚಟುವಟಿಕೆಗಳ ಯಶಸ್ವಿ ಆಯೋಜನೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. ಸಿದ್ದೇಶ್ವರಪ್ಪ ಅವರು ಮೂಲತಃ ಸಿರಾ ತಾಲ್ಲೂಕಿನ ಗೊಲ್ಲರಹಳ್ಳಿ ಗ್ರಾಮದವರು.
ಬೆಂಗಳೂರಿನ ಎಫ್ಕೆಸಿಸಿಐ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ.ರವಿ, ಸಂಸ್ಥೆಯ ಅಧ್ಯಕ್ಷ ಡಾ: ಬಿ.ಕೆ.ಬಂಗಾರಿ ಮತ್ತಿತರರು ಪ್ರಶಸ್ತಿ ಪ್ರದಾನ ಮಾಡಿದರು.
-ಕೆ.ಬಿ.ಚಂದ್ರಚೂಡ್