ತುಮಕೂರು: ಜೂ.21ರಂದು ಕೆ.ಎನ್.ಆರ್.ಅಮೃತಮಹೋತ್ಸವ ಮತ್ತು ಅಭಿನಂದನಾ ಗ್ರಂಥ ಬಿಡುಗಡೆ


ತುಮಕೂರು:ಒಂದು ಸಾಧಾರಣ ಕುಟುಂಬದಲ್ಲಿ ಹುಟ್ಟಿ, ರಾಜ್ಯದ ಸಹಕಾರ ಸಚಿವರಾದ ಕೆ.ಎನ್.ರಾಜಣ್ಣಅವರಿಗೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು,ಹಿತೈಷಿಗಳು ಜೂ.21 ರಂದು ಆಯೋಜಿಸಿರುವ ಅಮೃತ ಮಹೋತ್ಸವ ಮತ್ತು ಅಭಿನಂದನಾ ಗ್ರಂಥ ಬಿಡುಗಡೆ ಕಾರ್ಯಕ್ರಮ,2005ರಲ್ಲಿ ನಡೆದ ಅಹಿಂದ ಕಾರ್ಯಕ್ರಮಕ್ಕೆ ಸರಿಸಮವಾದ ಕಾರ್ಯಕ್ರಮವಾಗಲಿದೆ ಎಂದು ಅಭಿನಂದನಾಗ್ರಂಥ ಸಂಪಾದನಾ ಸಮಿತಿ ಅಧ್ಯಕ್ಷ ಎಸ್.ನಾಗಣ್ಣ ತಿಳಿಸಿದ್ದಾರೆ.

ಗೆಳೆಯರ ಬಳಗದ ಎನ್.ಗೋವಿಂದರಾಜು ಅಧ್ಯಕ್ಷತೆಯಲ್ಲಿ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಕೆ.ಎನ್.ರಾಜಣ್ಣ ಅಭಿಮಾನಿಗಳ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,2005ರ ಜೂನ್ 21 ರಂದು ಅಹಿಂದ ಸಮಾವೇಶವನ್ನು ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿತ್ತು. ಸುಮಾರು 1.50 ಲಕ್ಷಜನರು ಪಾಲ್ಗೊಂಡಿದ್ದರು.ಎಲ್ಲ ವರ್ಗದ ಜನರ ಪ್ರೀತಿ, ನಂಬಿಕೆ ಗಳಿಸಿರುವ ಕೆ.ಎನ್.ರಾಜಣ್ಣ ಅವರ ಅಮೃತ ಮಹೋತ್ಸವ ಕಾರ್ಯಕ್ರಮ ಸಹ ಮತ್ತೊಂದು ಅಹಿಂದ ಸಮಾವೇಶದಂತೆ ಜನರ ಮನಸ್ಸಿನಲ್ಲಿ ಉಳಿಯಲಿದೆ ಎಂದರು.

ಬಯಲು ಸೀಮೆ ಅಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ಕಲ್ಲಹಳ್ಳಿ ದೇವರಾಜು ಮಾತನಾಡಿ, ಸಹಕಾರಿ ಸಚಿವರಾದ ಕೆ.ಎನ್.ರಾಜಣ್ಣ ಅವರ ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಸಚಿವ ಸಂಪುಟದ ಸಹದ್ಯೋಗಿಗಳು,ಕೇಂದ್ರದ ಮಂತ್ರಿಗಳು ಹಾಗೂ ಜಿಲ್ಲೆಯ ಎಲ್ಲಾ ಶಾಸಕರು, ಸಂಸದರು, ಮಾಜಿ ಶಾಸಕರು, ಸಂಸದರು ಪಾಲ್ಗೊಳ್ಳಲಿದ್ದಾರೆ.ಟಿ.ಎ.ಪಿ.ಸಿ.ಎಂ ಎಸ್‌ನ ಸದಸ್ಯರಾಗುವ ಮೂಲಕ ಸಹಕಾರಿ ಕ್ಷೇತ್ರಕ್ಕೆ ಕಾಲಿಟ್ಟ ಕೆ.ಎನ್.ರಾಜಣ್ಣನವರು ಶಾಸಕರಾಗಿ,ಅವರ ಜೀವನದ ಆಸೆಯಂತೆ ಸಹಕಾರಿ ಮಂತ್ರಿಯಾಗಿದ್ದಾರೆ.ಅಲ್ಲದೆ ಕಳೆದ 25 ವರ್ಷಗಳಿಂದ ತುಮಕೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಇವರ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ನಮ್ಮ ಕಾರ್ಯಕ್ರಮವೆಂಬಂತೆ ನಾವುಗಳೆಲ್ಲರೂ ಸೇರಿ ಆಚರಿಸಬೇಕಿದೆ ಎಂದರು.

ಕನ್ನಡ ಸೇನೆಯ ಧನಿಯಕುಮಾರ್ ಮಾತನಾಡಿ, ಸರಕಾರದ ಶೂ ಭಾಗ್ಯಯೋಜನೆ ಸೇರಿದಂತೆ, ಸಾವನ್ನಪ್ಪಿದ ಸಾಲಗಾರರ ಸಾಲ ಮನ್ನಾ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದ ಕೆ.ಎನ್.ರಾಜಣ್ಣನವರು ಪ್ರಸ್ತುತ ದೇವರಾಜ ಅರಸು ಇದ್ದಂತೆ. ಹಾಗಾಗಿ ಅವರ ಕಾರ್ಯಕ್ರಮ ಯಶಸ್ವಿಗೊಳಿಸಲು ನಾವೆಲ್ಲರೂ ಕೈಜೋಡಿಸಬೇಕಿದೆ ಎಂದರು.

ಈ ವೇಳೆ ಗೀತಾರುದ್ರೇಶ್,ಸುಜಾತ, ನಯಾಜ್, ವೇದಿಕೆಯಲ್ಲಿ ಅಡಿಟರ್ ಸುಲ್ತಾನ್ ಮೊಹಮದ್, ವಿರೂಪಾಕ್ಷ ಡ್ಯಾಗೇರಹಳ್ಳಿ, ಷಣ್ಮುಖಪ್ಪ, ಮತ್ತಿತರರು ಉಪಸ್ಥಿತರಿದ್ದರು.

  • ಕೆ.ಬಿ.ಚಂದ್ರಚೂಡ

Leave a Reply

Your email address will not be published. Required fields are marked *