ತುಮಕೂರು ಮೇ.17: ತುಮಕೂರು ನಗರದ ವಿಸ್ತರಣೆಯಾಗಬೇಕು. ಈ ನಿಟ್ಟಿನಲ್ಲಿ 14 ಗ್ರಾಮ ಪಂಚಾಯತಿಗಳನ್ನು ತುಮಕೂರು ನಗರಕ್ಕೆ ವಿಲೀನ ಮಾಡಿಕೊಳ್ಳಲು ಯೋಜನೆ ರೂಪಿಸಲಾಗಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಜಿ. ಪರಮೇಶ್ವರ ತಿಳಿಸಿದರು.
ಮಹಾನಗರಪಾಲಿಕೆ ಆವರಣದಲ್ಲಿ ಶನಿವಾರ ನಗರದ ಜಿಲ್ಲಾಸ್ಪತ್ರೆ ಹಾಗೂ ಎಪಿಎಂಸಿ ಮಾರುಕಟ್ಟೆಯಲ್ಲಿ ಇಂದಿರಾ ಕ್ಯಾಂಟೀನ್, ಮಹಾನಗರ ಪಾಲಿಕೆ ಆವರಣದಲ್ಲಿ ಶಿಶುಪಾಲನಾ ಕೇಂದ್ರ, ಅಕ್ಕಾ ಕೆಫೆ ಹಾಗೂ ಮಹಾನಗರ ಪಾಲಿಕೆ ಸಭಾಂಗಣವನ್ನು ಉದ್ಘಾಟಿಸಿ ಮಾತನಾಡಿದರು.
ಬೆಂಗಳೂರAತೆ ತುಮಕೂರೂ ಸಹ ಬೆಳೆಯಬೇಕು. ಬೆಂಗಳೂರು ಮಹಾನಗರ ಪಾಲಿಕೆ ಈಗ ಗ್ರೇಟರ್ ಬೆಂಗಳೂರು ಆಗಲಿದೆ. ಅದರಂತೆ ಬೆಂಗಳೂರಿಗೆ ಹೆಬ್ಬಾಗಿಲಾಗಿರುವ ತುಮಕೂರು ಬೆಳವಣಿಗೆಗೆ ಇನ್ನಷ್ಟು ವೇಗ ನೀಡಬೇಕು ಎಂದು ತಿಳಿಸಿದರು.
ಈ ನಿಟ್ಟಿನಲ್ಲಿ ತುಮಕೂರಿನವರೆಗೂ ಮೆಟ್ರೋ ವಿಸ್ತರಣೆ ಮಾಡಬೇಕೆಂಬ ಉದ್ದೇಶದಿಂದ 2025-26ನೇ ಸಾಲಿನ ರಾಜ್ಯ ಬಜೆಟ್ನಲ್ಲಿ ಮಾದಾವರದಿಂದ ಶಿರಾಗೇಟ್ವರೆಗೂ ಒಟ್ಟು 52 ಕಿ.ಮೀ. ಮೆಟ್ರೋ ವಿಸ್ತರಣೆ ಮಾಡಲು ಯೋಜನೆ ರೂಪಿಸಲಾಗಿದೆ. ಮೆಟ್ರೋ ಮಾರ್ಗದ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರದ ಅನುಮತಿ ಕೋರಿ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಕ್ಲೀನ್ ಸಿಟಿ ನಿರ್ಮಾಣಕ್ಕೆ ಶ್ರಮಿಸಿ: ನಗರದ ಕೆಲ ಬೀದಿಗಳಲ್ಲಿ ಎಲ್ಲೆಂದರಲ್ಲಿ ಕಸ ಬಿದ್ದಿರುತ್ತದೆ ಎಂದು ಬೇಸರ ವ್ಯಕ್ತಪಡಿಸಿದ ಡಾ: ಜಿ.ಪರಮೇಶ್ವರ್ ಅವರು, ನಗರ ಪಾಲಿಕೆಗೆ ಬೇಕಿರುವ ಪೌರ ಕಾರ್ಮಿಕರನ್ನು, ವಾಹನಗಳನ್ನು ನೀಡಿದ್ದೇವೆ. ಆದರೆ ನಗರದ ಪ್ರಮುಖ ಬೀದಿಗಳಲ್ಲಿ ಕಸ ಹಾಗೇ ಇದೆ. ಸ್ವಚ್ಛತೆ ಮಾಡುತ್ತಿಲ್ಲ ಎಂದು ಸಂಬAಧಪಟ್ಟ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.
ಇನ್ನು ಮುಂದೆ ನಗರದಲ್ಲಿ ಸ್ವಚ್ಛತೆಯನ್ನು ನಿರ್ಲಕ್ಷಿಸಕೂಡದು. ನಿರ್ಲಕ್ಷö್ಯ ತೋರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಎಲ್ಲರೂ ಸೇರಿ ಕ್ಲೀನ್ಸಿಟಿಯನ್ನಾಗಿ ನಿರ್ಮಿಸಲು ಶ್ರಮಿಸಬೇಕು. ನಗರದಲ್ಲಿ ಗಿಡ ನೆಡುವ ಕಾರ್ಯ ಆಗಬೇಕು ಎಂದರು.

ರಾಜ್ಯದಲ್ಲಿ ಗಣಿಗಾರಿಕೆ ನಡೆದ ಪ್ರದೇಶಗಳಲ್ಲಿ ಸರ್ಕಾರ ಸೆಸ್ ಸಂಗ್ರಹಿಸಲಾಗಿದ್ದು, ಆ ಸೆಸ್ ಹಣದಲ್ಲಿ ತುಮಕೂರಿಗೆ 2500 ಕೋಟಿ ರೂ. ಬಂದಿದೆ. ಜಿಲ್ಲೆಯಲ್ಲಿ ಗಣಿಗಾರಿಕೆ ನಡೆಯುತ್ತಿರುವ ಪ್ರದೇಶಗಳ ಅಭಿವೃದ್ಧಿ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಿರ್ಮಾಣಕ್ಕೆ ಈ ಹಣವನ್ನು ಬಳಸಲಾಗುತ್ತದೆ ಎಂದು ತಿಳಿಸಿದರು.
ನಗರಪಾಲಿಕೆಯಲ್ಲಿ ಈವರೆಗೂ ಶೇ. 46ರಷ್ಟು ಜನ ತೆರಿಗೆ ಪಾವತಿ ಮಾಡಿದ್ದಾರೆ. ತೆರಿಗೆಯಿಂದ 36 ಕೋಟಿ ರೂ. ಸಂಗ್ರಹವಾಗಿರುವುದು ಅಭಿನಂದನಾರ್ಹ. ಉಳಿಕೆ ಶೇ.54 ರಷ್ಟು ತೆರಿಗೆ ಸಂಗ್ರಹಕ್ಕೆ ಮುಂದಾಗಬೇಕು ಎಂದು ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ತುಮಕೂರು ವಿಸ್ತರಣೆಗಾಗಿ ಗೃಹಸಚಿವರು ತೆಗೆದುಕೊಳ್ಳುವ ನಿರ್ಧಾರಗಳಿಗೆ ನಮ್ಮ ಸಮ್ಮತಿ ಇರುತ್ತದೆ. ಅಮಾನಿಕೆರೆ, ಕ್ರೀಡಾಂಗಣ ಸೇರಿದಂತೆ ಇನ್ನಿತರೆ ತುಮಕೂರಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲು ನಾವು ಸಿದ್ಧರಿದ್ದೇವೆ ಎಂದು ಹೇಳಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ನಗರಪಾಲಿಕೆ ಆಯುಕ್ತರಾದ ಬಿ.ವಿ. ಅಶ್ವಿಜಾ, ಸಾರ್ವಜನಿಕರ ಹಿತದೃಷ್ಟಿಯಿಂದ ಜಿಲ್ಲಾಸ್ಪತ್ರೆ ಹಾಗೂ ಎಪಿಎಂಸಿ ಮಾರುಕಟ್ಟೆಯಲ್ಲಿ 2 ಇಂದಿರಾ ಕ್ಯಾಂಟೀನ್, ಮಹಾನಗರ ಪಾಲಿಕೆಯಲ್ಲಿ ದುಡಿಯುವ ಮಹಿಳೆಯರ ಮಕ್ಕಳಿಗಾಗಿ ಶಿಶುಪಾಲನಾ ಕೇಂದ್ರ ಸ್ಥಾಪಿಸಲಾಗಿದೆ. ಶಿಶು ಪಾಲನಾ ಕೇಂದ್ರದಲ್ಲಿ 30 ಮಕ್ಕಳನ್ನು ಆರೈಕೆ ಮಾಡಲಾಗುತ್ತಿದೆ. ಪಾಲಿಕೆ ಆವರಣದಲ್ಲಿ ಅಕ್ಕ ಕೆಫೆಯನ್ನೂ ನಿರ್ಮಿಸಲಾಗಿದೆ. ಜತೆಗೆ 1940 ರಿಂದ ಇದುವರೆಗೂ ಇರುವ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗಿದ್ದು, ಅದನ್ನು ಡಿಜಿಟಲ್ ತಂತ್ರಾAಶದಲ್ಲಿ ಶೇಖರಿಸಲಾಗಿದೆ ಎಂದು ಹೇಳಿದರು.
ಈ ವೇಳೆ 20 ಆಸ್ತಿ ಮಾಲೀಕರಿಗೆ ಸಾಂಕೇತಿಕವಾಗಿ ಇ-ಆಸ್ತಿ ಹಾಗೂ ಬಿ-ಖಾತಾ ವಿತರಿಸಲಾಯಿತು. ಈ ವೇಳೆ ತುಮುಲ್ ಹಾಲು ಒಕ್ಕೂಟದ ಅಧ್ಯಕ್ಷರಾದ ಎಚ್.ವಿ. ವೆಂಕಟೇಶ್, ಜಿಲ್ಲಾಧಿಕಾರಿ ಶುಭಕಲ್ಯಾಣ್ ಹಾಗೂ ಜಿಲ್ಲಾ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ಉಪಸ್ಥಿತರಿದ್ದರು.
ನಗರ ಪಾಲಿಕೆಯಲ್ಲಿ ಭ್ರಷ್ಟಾಚಾರ: ತುಮಕೂರು ಮಹಾನಗರ ಪಾಲಿಕೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಸಾರ್ವಜನಿಕರು ನನಗೆ ನೇರವಾಗಿ ದೂರು ನೀಡಿದ್ದಾರೆ ಎಂದ ಡಾ.ಜಿ. ಪರಮೇಶ್ವರ್ ಅವರು, ಪಾಲಿಕೆ ಅಧಿಕಾರಿಗಳು ಇ-ಖಾತೆ, ಇ-ಸ್ವತ್ತು ಮಾಡಲು ಬಂದ ಜನರ ಬಳಿ ಲಂಚ ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಯಾವುದೇ ಅಧಿಕಾರಿ ಮೇಲಾಗಲಿ ಭ್ರಷ್ಟಾಚಾರ ಆರೋಪ ಕೇಳಿ ಬಂದಲ್ಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪಾಲಿಕೆ ಅಧಿಕಾರಿಗಳಿರುವುದು ಜನರ ಸೇವೆ ಮಾಡಲು. ಅದನ್ನು ಅರಿತು ಅಧಿಕಾರಿಗಳು ಕೆಲಸ ಮಾಡಬೇಕೇ ಹೊರತು ಲಂಚ ತೆಗೆದುಕೊಳ್ಳುವುದಲ್ಲ ಎಂದು ಕಿಡಿ ಕಾರಿದ ಅವರು, ದಿನನಿತ್ಯ ನಗರ ಪಾಲಿಕೆಗೆ ಜನರು ಇ-ಖಾತೆ ಮಾಡಿಸಲು ಬರುತ್ತಾರೆ. ಅಂತಹವರ ಕೆಲಸಗಳನ್ನು ಬೇಗ ಮಾಡಿಕೊಡಬೇಕು ಎಂದು ಖಾರವಾಗಿ ನುಡಿದರು.

ಸ್ಮಾಟ್ಸಿಟಿ ಯೋಜನೆ ಬಗ್ಗೆ ಮಾತನಾಡಿದ ಪರಮೇಶ್ವರ್, ನಗರದ 35 ವಾರ್ಡ್ಗಳಲ್ಲಿ 6 ವಾರ್ಡ್ಗಳಿಗೆ ಮಾತ್ರ ಈ ಸ್ಮಾರ್ಟ್ಸಿಟಿ ಯೋಜನೆ ಸಿಕ್ಕಿದೆ. ಉಳಿದ 29 ವಾರ್ಡ್ಗಳಿಗೆ ಲಭ್ಯವಾಗಿಲ್ಲ. ಸ್ಮಾರ್ಟ್ಸಿಟಿ ಯೋಜನೆಗೆ 175 ಕೋಟಿ ರೂ. ಅನುದಾನ ಸಿಕ್ಕಿತ್ತು. ಅದರಲ್ಲಿ 137 ಕೋಟಿಗಳನ್ನು ರಸ್ತೆ ಅಭಿವೃದ್ಧಿ, 18 ಕೋಟಿ ರೂ.ಗಳನ್ನು ಪಾರ್ಕ್ ಅಭಿವೃದ್ಧಿ ಹಾಗೂ ಉಳಿದ ಹಣವನ್ನು ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಉಪಯೋಗಿಸಲಾಗಿದೆ ಎಂದು ಮಾಹಿತಿ ನೀಡಿದ ಅವರು ಮುಂದಿನ ದಿನಗಳಲ್ಲಿ 29 ವಾರ್ಡ್ಗಳನ್ನೂ ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದರು.
ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ನಗರ ಪಾಲಿಕೆ ಅಧಿಕಾರಿಗಳ ಆವರಣ ಆಗಬೇಕೆ ಹೊರತು, ಬ್ರೋಕರ್ಗಳ ಆವರಣ ಆಗಬಾರದು. ಅಧಿಕಾರಿಗಳು ಜನರನ್ನು ಅಲೆದಾಡಿಸುವುದನ್ನು ಬಿಟ್ಟು, ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಜನಸ್ನೇಹಿಯಾಗಿ ಕೆಲಸ ಮಾಡಬೇಕು.
ತುಮುಲ್ ಅಧ್ಯಕ್ಷ ಎಚ್.ವಿ. ವೆಂಕಟೇಶ್, ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಇದ್ದರು.