ತುಮಕೂರು- ಎಲ್ಲ ಸಮುದಾಯದ ಯುವಕರು ಸಮಾಜದ ಮುಖ್ಯವಾಹಿನಿಗೆ ಬರಲು ಕ್ರೀಡೆಗಳು ಅತ್ಯವಶ್ಯ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಅಗ್ನಿವಂಶ ಕ್ಷತ್ರಿಯ ತಿಗಳ ಯೂತ್ ಪೋರ್ಸ್(ರಿ) ಸಂಸ್ಥೆ ವತಿಯಿಂದ ಎರಡು ದಿನಗಳ ಕಾಲ ಏರ್ಪಡಿಸಲಾಗಿರುವ ಅಗ್ನಿಶ್ರೀ ಕಪ್ ಹೆಸರಿನ ರಾಜ್ಯಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮುಂದಿನ ದಿನಗಳಲ್ಲಿ ಯುವಕರು ಎಲ್ಲ ರೀತಿಯ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಅವರು ಕರೆ ನೀಡಿದರು.ಅಗ್ನಿವಂಶ ಕ್ಷತೀಯ ತಿಗಳ ಯೂತ್ ಪೋರ್ಸ್ (ರಿ) ಸಂಸ್ಥೆಯು ಯುವಕರನ್ನು ಸಂಘಟಿಸಿ ಕ್ರಿಕೆಟ್ ಟೂರ್ನಿಮೆಂಟ್ ಆಯೋಜಿಸಿರುವುದು ಒಳ್ಳೆಯ ಕಾರ್ಯ. ಮುಂದಿನ ದಿನಗಳಲ್ಲಿ ಈ ಕಾರ್ಯ ಹೀಗೆ ಮುಂದುವರೆಯಲಿ ಎಂದು ಆಶಿಸಿದರು.

ಅಗ್ನಿವಂಶ ಕ್ಷತ್ರೀಯ ತಿಗಳ ಯೂತ್ ಪೋರ್ಸ್(ರಿ) ಸಂಸ್ಥೆಯ ರಾಜ್ಯಾಧ್ಯಕ್ಷ ಮಾರುತಿ ಕೆ.ಆರ್. ಮಾತನಾಡಿ, ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ರಾಜ್ಯಮಟ್ಟದ 2 ದಿನಗಳ ಕ್ರಿಕೆಟ್ ಹಬ್ಬ ಆಚರಣೆ ಮಾಡಲಾಗುತ್ತಿದ್ದು, ಯಶಸ್ವಿಯಾಗಿ ನಡೆಯುತ್ತಿದೆ. ನಮ್ಮ ಸಮುದಾಯದ ಯುವಕರು ಉತ್ಸಾಹದಿಂದ ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎಂದರು.
ಪ್ರತಿ ವರ್ಷವೂ ಇದೇ ರೀತಿ ನಮ್ಮ ಸಂಸ್ಥೆ ವತಿಯಿಂದ ಕ್ರಿಕೆಟ್ ಟೂರ್ನಿಯನ್ನು ಏರ್ಪಡಿಸಲಾಗುವುದು. ಈ ಮೂಲಕ ಸಮುದಾಯದ ಯುವಕರನ್ನು ಒಗ್ಗೂಡಿಸುವ ಕೆಲಸವೂ ಆಗಲಿದೆ ಎಂದು ಅವರು ಹೇಳಿದರು.ಕ್ರೀಡೆ ದೈಹಿಕ ಸಾಮರ್ಥ್ಯದ ಜತೆಗೆ ಯುವಕರಲ್ಲಿ ಹೆಚ್ಚಿನ ಶಕ್ತಿ ನೀಡುತ್ತಿದೆ. ಇದರಿಂದ ದೇಹ ಮತ್ತು ಮನಸ್ಸು ಉಲ್ಲಾಸಗೊಳ್ಳುತ್ತದೆ. ಇದನ್ನು ಯುವ ಸಮುದಾಯ ಅರಿತು ಹೆಚ್ಚು ಹೆಚ್ಚು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅವರು ಸಲಹೆ ಮಾಡಿದರು.

ಈ ಸಂದರ್ಭದಲ್ಲಿ ಸಮುದಾಯದ ಯಜಮಾನ್ ಕುಂಭಣ್ಣ, ಯಜಮಾನ್ ಹನುಮಂತರಾಜು, ಯಜಮಾನ್ ಗಂಗಹನುಮಯ್ಯ, ಯಜಮಾನ್ ಉಮೇಶ್, ಯಜಮಾನ್ ಜಗದೀಶ್, ಚಕ್ರವರ್ತಿಪ್ರಕಾಶ್, ಅಮೋಘ್, ರಮೇಶ್, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ