ತುಮಕೂರು-ಬೀದಿಬದಿ ವ್ಯಾಪಾರಿಗಳ ಸಂಘದಿಂದ ಬಡ ಮಕ್ಕಳಿಗೆ ನೆರವು ವಿತರಣೆ

ತುಮಕೂರು: ಗಿಡ, ಮರ, ಸೂರ್ಯ, ಚಂದ್ರ ಸೇರಿದಂತೆ ಪ್ರಕೃತಿಯು ಬೇರೆಯವರಿಗೆ ಸಹಾಯ ಮಾಡುವ ಪರೋಪಕಾರಿಯಾಗಿದೆ. ಮನುಷ್ಯಕೂಡಾ ಪರೋಪಕಾರದ ಪಾಠವನ್ನು ಪ್ರಕೃತಿಯಿಂದ ಕಲಿತು, ಪರೋಪಕಾರ ಮಾಡುತ್ತಾ ತನ್ನ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕು. ಉಳ್ಳವರು ಬಡವರಿಗೆ ಸಹಾಯ ಮಾಡುವ ಔದಾರ್ಯಗುಣ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ ಹೇಳಿದರು.

ನಗರದಲ್ಲಿ ಶ್ರಮಜೀವಿ ಬೀದಿಬದಿ ವ್ಯಾಪಾರಿಗಳ ಸಂಘದಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಂಘದ ರಾಜ್ಯಾಧ್ಯಕ್ಷ ಎಂ.ಗೋಪಿಯವರ ಅಕಾಲಿಕ ಮರಣಕ್ಕೀಡಾದ ಮಗ ಗೌತಮ್ ನೆನಪಿನಲ್ಲಿ ಬಡ ಮಕ್ಕಳಿಗೆ ವಿವಿಧ ಸವಲತ್ತು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ವಿತರಿಸಿ ಮಾತನಾಡಿದರು.

ನಮ್ಮ ಸಮಾಜದಲ್ಲಿ ಕೋಟ್ಯಾಂತರ ರೂಪಾಯಿ ಆಸ್ತಿ ಹೊಂದಿರುವ ಅನೇಕ ಶ್ರೀಮಂತರಿದ್ದಾರೆ.ಆದಾಯ ತೆರಿಗೆ, ಇ.ಡಿ. ಅಧಿಕಾರಿಗಳು ದಾಳಿ ಮಾಡಿ ಬಹಿರಂಗ ಮಾಡಿದಾಗಲಷ್ಟೇ ಅವರ ಆಸ್ತಿಪಾಸ್ತಿಯ ಮಾಹಿತಿ ಗೊತ್ತಾಗುತ್ತದೆ.ಅಂತಹ ಶ್ರೀಮಂತರು ಬಡವರಿಗೆ, ಅಸಹಾಯಕರಿಗೆ ಸಹಾಯ ಮಾಡುವ ಉದಾರತನ ಹೊಂದಬೇಕು.ಅಗತ್ಯವಿರುವವರಿಗೆ ಸಹಾಯ ಮಾಡುವ ಮನೋಭಾವವನ್ನು ಶ್ರೀಮಂತರು ಬೆಳೆಸಿಕೊಳ್ಳಬೇಕು ಸಂಘದ ರಾಜ್ಯಾಧ್ಯಕ್ಷ ಗೋಪಿಯವರು ತಮ್ಮ ಮಗನ ಸ್ಮರಣೆಯಲ್ಲಿ ಬಡಮಕ್ಕಳಿಗೆ ಸಹಾಯ ಮಾಡುವ ಕಾರ್ಯದಲ್ಲಿ ತೊಡಗಿರುವುದು ಸಮಾಜ ಮೆಚ್ಚುವಂತಹ ಆದರ್ಶಕಾರ್ಯ ಎಂದರು.

ಶ್ರಮಜೀವಿ ಬೀದಿಬದಿ ವ್ಯಾಪಾರಿಗಳ ಸಂಘದ ರಾಜ್ಯಾಧ್ಯಕ್ಷ ಎಂ.ಗೋಪಿ ಮಾತನಾಡಿ, ತಮಗಿದ್ದ ಒಬ್ಬನೇ ಮಗ ಚಿಕ್ಕ ವಯಸ್ಸಿನಲ್ಲೇ ಅಕಾಲಿಕ ಮರಣಕ್ಕೀಡಾದ, ಪುತ್ರಶೋಕಂ ನಿರಂತರಂ ಎನ್ನುವ ನೋವಿನ ನಡುವೆ, ಬಡ ಮಕ್ಕಳಿಗೆ ಸಹಾಯ ಮಾಡುತ್ತಾ, ಆವರ ಆನಂದದಲ್ಲಿ ತಮ್ಮ ಮಗನನ್ನು ಕಾಣುವ ಪ್ರಯತ್ನ ಮಾಡುತ್ತೇನೆ ಎಂದರು.

ಮುಂದೆ ಅನಾಥಾಶ್ರಮ, ವಿಕಲಚೇತನರಿಗೆ ನೆಲೆ ನೀಡಿ ನೆರವಾಗುವ ಆಶ್ರಮ ಸ್ಥಾಪನೆ ಮಾಡುವ ಗುರಿ ಹೊಂದಿದ್ದು ಅದಕ್ಕಾಗಿ ಪ್ರಯತ್ನ ಮಾಡುತ್ತಿದ್ದೇನೆ. ಜೊತೆಗೆ ಬಡ ಬೀದಿಬದಿ ವ್ಯಾಪಾರಿಗಳಿಗೆ ಸರ್ಕಾರದ ಯೋಜನೆಗಳ ನೆರವು, ನಗರಪಾಲಿಕೆ ಸ್ಥಾಪನೆ ಮಾಡುವ ವಾಣಿಜ್ಯ ವಲಯದಲ್ಲಿ ವ್ಯಾಪಾರ ಮಾಡಲು ಅವಕಾಶಕಲ್ಪಿಸಿಕೊಡುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ರಾಜ್ಯ ಸಂಘದ ಉಪಾಧ್ಯಕ್ಷ ಶಬ್ಬೀರ್‌ಅಹ್ಮದ್, ಪ್ರಧಾನ ಕಾರ್ಯದರ್ಶಿ ರಾಜಣ್ಣ,ಜಿಲ್ಲಾಧ್ಯಕ್ಷ ರಾಜು, ಮಹಿಳಾ ಘಟಕ ರಾಜ್ಯ ಉಪಾಧ್ಯಕ್ಷೆ ರಮ್ಯ, ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷೆ ಶೃತಿ, ಕನ್ನಡ ಪ್ರಕಾಶ್, ಆದಿಲ್ ಬಾಷಾ ಮೊದಲಾದವರು ಭಾಗವಹಿಸಿದ್ದರು.

– ಕೆ.ಬಿ.ಚಂದ್ರಚೂಡ

Leave a Reply

Your email address will not be published. Required fields are marked *