ತುಮಕೂರು: ಶಿಕ್ಷಕರು ಕಾರ್ಯ ದಕ್ಷತೆ ಹೆಚ್ಚಿಕೊಳ್ಳಲು ತರಬೇತಿಗಳು ಅಗತ್ಯ ಎಂದು ಜಿಲ್ಲಾ ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಪ್ರಭು ಅವರು ಹೇಳಿದರು.
ಅವರು ನಗರದ ಎಂಪ್ರೆಸ್ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಸ್ಯಾಟ್ಸ್ ಹಾಗೂ ರೋಸ್ಟರ್ ತಂತ್ರಾಂಶ ನಿರ್ವಹಣೆ ಕುರಿತು ಜಿಲ್ಲೆಯ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು ಹಾಗೂ ಸಿಬ್ಬಂದಿಗೆ ಹಮ್ಮಿಕೊಳ್ಳಲಾಗಿದ್ದ ತರಬೇತಿ ಉದ್ಘಾಟಿಸಿ ಮಾತನಾಡಿದರು.
ದೇಶದ ಭವಿಷ್ಯವೇ ಮಾನವ ಸಂಪನ್ಮೂಲ. ಅದನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದ ಅವರು ದೇಶದ ಬಾಹ್ಯ ರಕ್ಷಣಾ ವ್ಯವಸ್ಥೆಯೇ ಆಗಲಿ, ಆಂತರಿಕ ಭದ್ರತೆಯನ್ನು ಒದಗಿಸುವ ಪೋಲೀಸ್ ವ್ಯವಸ್ಥೆಯೇ ಆಗಲಿ ಎಲ್ಲವೂ ಮೌಲ್ಯಯುತ ಶಿಕ್ಷಣದ ಮೇಲೆಯೇ ನಿಂತಿದೆ ಎಂದರು.

ಕನಿಷ್ಟ ಹತ್ತು ಮೌಲ್ಯಗಳನ್ನು ಪರಿಗಣಿಸಿ ಪಠ್ಯಪುಸ್ತಕಗಳನ್ನು ರಚಿಸಿ ವಿದ್ಯಾರ್ಥಿಗಳಲ್ಲಿ ಮೌಲ್ಯ ಬಿತ್ತುವ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದ ಅವರು ಬುನಾದಿ ಮೌಲ್ಯಯುತವಾಗಿದ್ದರೆ ಕಟ್ಟಡ ನಿರ್ಮಿಸುವುದು ಸರಳ ಎಂದರು.
ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಡಾ. ಬಾಲಗುರುಮೂರ್ತಿಯವರ ನೇತೃತ್ವದಲ್ಲಿ ಜಿಲ್ಲಾ ಪಿಯು ವ್ಯವಸ್ಥೆ ಪರಿಣಾಮಕಾರಿ ಮೂಡಿ ಬರುತ್ತಿರುವುದು ಮೆಚ್ಚುವಂತದ್ದು ಎಂದರು.
ಇಲಾಖೆಯು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಸ್ಯಾಟ್ಸ್ ತಂತ್ರಾಂಶವನ್ನು ಸರಿಯಾಗಿ ನಿರ್ವಹಿಸಲು ಅನುಕೂಲವಾಗಲೆಂದು ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದ್ದು ಎಲ್ಲಾ ಕಾಲೇಜುಗಳಲ್ಲಿ ಗೊಂದಲವಿಲ್ಲದೇ ನಿಭಾಯಿಸಬೇಕು. ಇಲ್ಲದೇ ಹೋದರೆ ಆಯಾ ಕಾಲೇಜಿನ ಪ್ರಾಂಶುಪಾಲರೇ ನೇರ ಹೊಣೆಗಾರರಾಗಬೇಕಾಗುತ್ತದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಡಾ. ಬಾಲಗುರುಮೂರ್ತಿಯವರು ಹೇಳಿದರು.

ನಿರ್ದೇಶಕರ ಕಚೇರಿಯಿಂದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಸಹಾಯಕ ನಿರ್ದೇಶಕರಾದ ಆನಂದ್, ಗಿರೀಶ ಟೊಣಪಿ ಆವರು ಸ್ಯಾಟ್ಸ್ ಕುರಿತು ತರಬೇತಿ ನೀಡಿದರು. ಕಾರ್ಯಕ್ರಮದಲ್ಲಿ ತಾಂತ್ರಿಕ ನಿರ್ವಾಹಕರಾದ ಓಂಕಾರ್ ಬಿರಾದರ್, ಶಾಖಾಧಿಕಾರಿ ವೆಂಕಟೇಶ್, ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ಪ್ರಭಾಕರರೆಡ್ಡಿ, ಅನುದಾನಿತ ಕಾಲೇಜುಗಳ ನೌಕರರ ಸಂಘದ ಅಧ್ಯಕ್ಷರಾದ ಗೋವಿಂದರಾಜು ಮತ್ತಿತರರು ಹಾಜರಿದ್ದರು.
ತರಬೇತಿಯಲ್ಲಿ ಜಿಲ್ಲೆಯ ಸರ್ಕಾರಿ, ಅನುದಾನಿತ, ಅನುದಾನ ರಹಿತ ಕಾಲೇಜುಗಳ ಸಿಬ್ಬಂದಿ ಹಾಜರಿದ್ದರು. ಸಂತೋಷ್, ರಾಮಣ್ಣ, ಧನುಷ್, ಪುನೀತ್, ಶಾಖಾಧಿಕಾರಿ ಉಮಾ ಉಪಸ್ಥಿತರಿದ್ದರು. ಜಮೀರ್ ಪಾಷಾ ಕಾರ್ಯಕ್ರಮ ನಿರೂಪಿಸಿದರು ರಾಮಣ್ಣ ವಂದಿಸಿದರು.